ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಲಕ್ನೋ ಏರ್ಪೋರ್ಟ್ ಅಲ್ಲಿ ಕೋಕಾ ಕೋಲಾ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ವಿಮಾನ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ತಡವಾಗಿ ಬಂದು ವಿಮಾನವನ್ನು ಹತ್ತಲು ಹೋಗುತ್ತಿದ್ದಾಗ ಅವರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಅವರಿಗೆ ಏರ್ಪೋರ್ಟ್ನ ಭದ್ರತಾ ಸಿಬ್ಬಂದಿ ಪಿಸಿಆರ್ ಮಾಡಿದರೂ ಕೂಡ ಆಸ್ಪತ್ರೆಗೆ ತಲುಪುವುದಕ್ಕೂ ಮೊದಲೇ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.
ಮೃತರಾದ ಚಾರ್ಟೆಡ್ ಅಕೌಂಟೆಂಟ್ ಅವರನ್ನು 42 ವರ್ಷದ ಅನೂಪ್ ಕುಮಾರ್ ಪಾಂಡೆ ಎಂದು ಗುರುತಿಸಲಾಗಿದೆ.
ರಾತ್ರಿ 10.30ಕ್ಕೆ ಇದ್ದ ವಿಮಾನದಲ್ಲಿ ಅವರು ದೆಹಲಿಗೆ ಹೋಗಬೇಕಿತ್ತು. ಆದರೆ ಅವರು ಬಂದ ಕ್ಯಾಬ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಅವರು ಬಹಳ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಓಡೋಡುತ್ತಲೇ ವಿಮಾನ ನಿಲ್ದಾಣದ ಕೌಂಟರ್ಗೆ ಆಗಮಿಸಿದ್ದರು. ಆದರೆ ವೇಗವಾಗಿ ಓಡುತ್ತಾ ಬಂದವರು ನೆಲಕ್ಕೆ ಕುಸಿದಿದ್ದು, ಮತ್ತೆ ಮೇಲೇಳಲಿಲ್ಲ. ಕೂಡಲೇ ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರಿಗ ಸಿಪಿಆರ್ ಮಾಡಿದ್ದಾರೆ. ಅಲ್ಲದೇ ಸ್ಟ್ರೆಚರ್ ತರಿಸಿ ಅನೂಪ್ ಅವರನ್ನು ಅದರಲ್ಲಿ ಮಲಗಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಲೋಕಬಂಧು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಅವರು ಆಸ್ಪತ್ರೆಗೆ ಬರುತ್ತಲೇ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಕಾನ್ಪುರದ ಕಲ್ಯಾಣಪುರ ಮೂಲದವರಾದ ಅನೂಪ್ ಪಾಂಡೆ ಅವರು, ಸಿಎ ಹಾಗೂ ಹಣಕಾಸು ಕಾರ್ಯಾನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಪೂಜಾ, ಒಬ್ಬ ಮಗ ಮತ್ತು ಮಗಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅವರು ಐದು ದಿನಗಳ ಹಿಂದೆ ಪರಿಚಯಸ್ಥರೊಬ್ಬರ ತೇರಾಹ್ವಿನ್ (13 ನೇ ದಿನದ ಆಚರಣೆ) ಯಲ್ಲಿ ಭಾಗವಹಿಸುವುದಕ್ಕಾಗಿ ಕಾನ್ಪುರಕ್ಕೆ ಬಂದಿದ್ದರು. ಆದರೆ ವಾಪಸ್ ಬೆಂಗಳೂರು ತಲುಪುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರವೂ ಅವರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಬೆಂಬಲವನ್ನು ಒದಗಿಸುವುದಕ್ಕೆ ವಿಫಲವಾಗಿದೆ ಎಂದು ಅನೂಪ್ ಅವರ ಅಳಿಯ ಆರೋಪಿಸಿದ್ದಾರೆ. ಅಲ್ಲಿಗೆ ಆಂಬುಲೆನ್ಸ್ ಕೂಡ ಲೇಟಾಗಿ ಬಂತು ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಅವರು ಅಂದೇ ಮೃತರಾದರು ಮರುದಿನ ಅವರ ಕುಟುಂಬದವರಿಗೆ ತಿಳಿಸಲಾಯ್ತು ಎಂದು ಅವರ ಸಂಬಂಧಿ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ ಭಾರಿ ಟ್ರಾಫಿಕ್ ಜಾಮ್ನಲ್ಲಿ ತಮ್ಮ ಕಾರು ಸಿಲುಕಿಕೊಂಡ ನಂತರ ಅನೂಪ್ ಅವರು ಚಿಂತೆ ಹಾಗೂ ಒತ್ತಡಕ್ಕೆ ಒಳಗಾದರು. ಬಹುಶಃ ಈ ಒತ್ತಡವೇ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಕ್ಕೆ ಕಾರಣವಾಗಿರಬಹುದು. ಗಾಡಿಯನ್ನು ಪಾರ್ಕ್ ಮಾಡಿದ ಅವರು ಕೂಡಲೇ ಟರ್ಮಿನಲ್ಗೆ ಓಡಿ ಬಂದು ಅಲೇ ಕುಸಿದು ಬಿದ್ದರು ಎಂದು ಅವರು ಹೇಳಿದರು.

