ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನತ್ತ ಸಾಗುತ್ತಿದ್ದ ಟ್ರಕ್ ಚಾಲಕನೊಬ್ಬ ಮಾರ್ಗ ಮಧ್ಯೆ ಟೀ ಕುಡಿಯಲು ವಾಹನ ನಿಲ್ಲಿಸಿದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳುಪೇಟೆಯಲ್ಲಿ ನಡೆದಿದೆ.
ಘಟನೆ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದು, ಹೃದಯಾಘಾತವೇ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಟೀ ವಿರಾಮವೇ ಕೊನೆಯ ಕ್ಷಣ
ಮೃತರನ್ನು ಉತ್ತರ ಪ್ರದೇಶದ ಬರೇಲಿ ಮೂಲದ 50 ವರ್ಷದ ಅಮರ್ ಸಿಂಗ್ ಪೈ ಎಂದು ಗುರುತಿಸಲಾಗಿದೆ. ಅವರು ಟ್ರಕ್ನಲ್ಲಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ವೇಳೆ ಬಾಳುಪೇಟೆ ಬಳಿ ಟೀ ಕುಡಿಯಲು ವಾಹನ ನಿಲ್ಲಿಸಿದ್ದರು. ಟೀ ಸೇವಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ:
ಸಿಸಿಟಿವಿಯಲ್ಲಿ ಸೆರೆ
ಚಾಲಕ ಕುಸಿದು ಬೀಳುವ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಘಟನೆ ಕೆಲವೇ ಕ್ಷಣಗಳಲ್ಲಿ ನಡೆದಿರುವುದು ವಿಡಿಯೋದಲ್ಲಿ ಗೋಚರಿಸಿದೆ. ಸ್ಥಳದಲ್ಲಿದ್ದವರು ಕೂಡಲೇ ನೆರವಿಗೆ ಧಾವಿಸಿದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಹೃದಯಾಘಾತ ಶಂಕೆ
ಸುದ್ದಿ ತಿಳಿಯುತ್ತಿದ್ದಂತೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತದಿಂದ ಚಾಲಕ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ನಿಖರ ಕಾರಣ ವೈದ್ಯಕೀಯ ಪರೀಕ್ಷೆಯ ವರದಿಯ ಬಳಿಕ ತಿಳಿಯಲಿದೆ.



