ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಯೋತ್ಪಾದಕರ ಜಾಲ ಶೋಧ ಕಾರ್ಯಾಚರಣೆಯಲ್ಲಿ ಕೆನಡಾ ಮೂಲದ ನಿಯೋಜಿತ ಭಯೋತ್ಪಾದಕ ಅರ್ಷ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲ್ಲಾ ಸೇರಿದಂತೆ ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕೇಂದ್ರೀಯ ಭಯೋತ್ಪಾದನಾ ನಿಗ್ರಹ ಕಾನೂನು ಜಾರಿ ಸಂಸ್ಥೆಯ ಪ್ರಕಾರ, ಬಂಧಿತರನ್ನು ಲಕ್ಕಿ ಖೋಖರ್, ಲಖ್ವೀರ್ ಸಿಂಗ್, ಹರ್ಪ್ರೀತ್, ದಲೀಪ್ ಬಿಷ್ಣೋಯ್, ಸುರೀಂದರ್ ಅಲಿಯಾಸ್ ಚಿಕು ಚೌಧರಿ ಮತ್ತು ಹರಿ ಓಂ ಅಲಿಯಾಸ್ ಟಿಟು ಎಂದು ಗುರುತಿಸಲಾಗಿದೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇತ್ತೀಚೆಗೆ ನಡೆಸಿದ ಎಂಟು ರಾಜ್ಯಗಳ 76 ಸ್ಥಳಗಳ ರಾಷ್ಟ್ರವ್ಯಾಪಿ ದಾಳಿಯಲ್ಲಿ ಗ್ಯಾಂಗ್ಸ್ಟರ್ಗಳನ್ನು ಬಂಧಿಸಿದ್ದಾರೆ.
ಭಾರತದಲ್ಲಿ ಪ್ರಮುಖ ದರೋಡೆಕೋರಾಗಿದ್ದ ಹಲವು ಅಪರಾಧಿಗಳು, ಪಾಕಿಸ್ತಾನ, ಕೆನಡಾ, ಮಲೇಷ್ಯಾ, ಫಿಲಿಪೀನ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಜೈಲಿನಲ್ಲಿರುವ ಅಪರಾಧಿಗಳೊಂದಿಗೆ ಸೇರಿಕೊಂಡು ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳನ್ನು ಯೋಜಿಸುತ್ತಿದ್ದರು ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಈ ಭಯೋತ್ಪಾದಕ ಗುಂಪುಗಳು ವಿವಿಧ ದುಷ್ಕೃತ್ಯಗಳ ಮೂಲಕ ಹಣವನ್ನು ಸಂಗ್ರಹಿಸುತ್ತಿವೆ. ಖೋಕರ್, ಖಲಿಸ್ತಾನ್ ಲಿಬರೇಶನ್ ಫೋರ್ಸ್, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್, ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ ಸೇರಿ ಹಲವಾರು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.