ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ: ಭಾರತ ಹಾಗೂ ಅದರ ಸಂಸ್ಕೃತಿ ಪಠ್ಯವಲ್ಲ ಅದು ನಮ್ಮ ಜೀವನ ಪದ್ಧತಿ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಹೇಳಿದರು.
ನಗರದ ಕೆಎಲ್ಎಸ್ ಗೋಗ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ಪ್ರಬುದ್ಧ ಭಾರತದಿಂದ ನಡೆದ ಯುವ-೨೦೨೩ ಸಮ್ಮೇಳನದಲ್ಲಿ ಯುವ ಪೀಳಿಗೆಯ ಕರ್ತವ್ಯ ಹಾಗೂ ಅಧಿಕಾರದ ಕುರಿತು ಅವರು ಮಾತನಾಡಿದರು. ಆತ್ಮೀಯತೆಗೆ ಒಂದೇ ವಿಧಾನ ಎಂದರೆ ಅದು ಕಷ್ಟದಲ್ಲಿರುವವರಿಗೆ ಸೇವೆ ಮಾಡುವುದು. ಶರೀರ, ಮನಸ್ಸು, ಬುದ್ಧಿ ಎಲ್ಲವೂ ಸಮನಾಗಿರಬೇಕು. ಇದರಿಂದ ಆಧ್ಯಾತ್ಮಿಕ ಪ್ರಗತಿ ಸಾಧ್ಯ. ಸಮಾಜಕ್ಕೆ ಸಂತೋಷ ಹಂಚಬೇಕಾದರೆ ಮೊದಲು ಅದು ನಮ್ಮಲ್ಲಿರಬೇಕು. ಇದಕ್ಕೆ ಆಧ್ಯಾತ್ಮ ಅವಶ್ಯ. ನಮ್ಮ ಆಚರಣೆಗಳೇ ದೇಶದ ಆಸ್ತಿ ಆದರೆ ಪ್ರಸ್ತುತ ಅವುಗಳೇ ನಮ್ಮ ಸವಾಲಾಗಿವೆ. ಅವುಗಳನ್ನು ಪರಿಹರಿಸಿಕೊಳ್ಳಬೇಕು.
ಧರ್ಮ ಎಂದರೆ ಜೀವನ ಪದ್ಧತಿ. ಇತರರಿಗೆ ತೊಂದರೆಯಾಗದಂತೆ ಜೀವನ ನಡೆಸುವುದು. ಜಗತ್ತಿನಲ್ಲಿ ಈ ಪರಿಕಲ್ಪನೆ ಬೇರೆ ದೇಶಗಳಿಗಿಲ್ಲ. ನಮ್ಮ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು ಹಾಗೂ ಅವುಗಳನ್ನು ಆಚರಣೆಗೆ ತರುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ನಾವು ಭಾವನೆಗಳ ಆಧಾರದ ಮೇಲೆ ಜೀವಿಸುತ್ತೇವೆ ಹಾಗಾಗಿ ನಮ್ಮ ಭಾವನೆಗಳು ಸರಿಯಾಗಿರಬೇಕು. ನಮ್ಮ ಸಂಪ್ರದಾಯಗಳನ್ನು ತಿಳಿದರೆ ಸಾಲದು, ಪಾಲಿಸುವುದು ಅಷ್ಟೇ ಮುಖ್ಯವಾಗಿದೆ. ಇವು ಇಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.