ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಹೊಟೇಲ್ಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆಯ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಲೈಸನ್ಸ್ ಇಲ್ಲದೆ ಮತ್ತು ಅಸುರಕ್ಷಿತವಾಗಿ ವ್ಯಾಪಾರ ನಡೆಸುತ್ತಿದ್ದ ಬಸ್ ನಿಲ್ದಾಣದ ಬಳಿಯ ಲಿಬರ್ಟಿ ಹೊಟೇಲನ್ನು ಬಂದ್ ಮಾಡಿಸಿದ್ದಾರೆ.
ಆರೋಗ್ಯ ವಿಭಾಗದ ಅಧಿಕಾರಿಗಳು ಹಲವು ದಿನಗಳಿಂದ ಈ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿ ಹೊಟೇಲುಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಸೂಚನೆಗಳನ್ನು ನೀಡುತ್ತಿದ್ದಾರೆ.
ಅಂತೆಯೇ, ಮಂಗಳವಾರ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿ ಲೈಸನ್ಸ್ ಇಲ್ಲದೆ ಹೊಟೇಲ್ ನಡೆಸುತ್ತಿದ್ದಾರೆಂಬ ಲಿಖಿತ ದೂರಿಗೆ ಸಂಬಂಧಿಸಿ ಲಿಬರ್ಟಿ ಹೊಟೇಲ್ಗೆ ದಾಳಿ ನಡೆಸಿದಾಗ ನಗರಸಭೆಯಿಂದ ಮತ್ತು ಆರೋಗ್ಯ ಇಲಾಖೆಯಿಂದ ಲೈಸನ್ಸ್ ಪಡೆಯದೆ ಹೊಟೇಲ್ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಜತೆಗೆ ಅತ್ಯಂತ ಗಲೀಜು ವಾತಾವರಣದಲ್ಲಿ ತಿನಿಸುಗಳನ್ನು ಪೂರೈಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹೊಟೇಲ್ ಅನ್ನು ಬಂದ್ ಮಾಡಲು ಸೂಚಿಸಿದ್ದಾರೆ. ನಗರದ ಮುರದಲ್ಲೂ ಕೂಡಾ ಹೊಟೇಲ್ವೊಂದರಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.