ಹೊಸ ದಿಗಂತ ವರದಿ, ಮಡಿಕೇರಿ:
ಲಾರಿಯಲ್ಲಿ ಹೆಬ್ಬಲಸು ಮರದ ತುಂಡುಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ.
ಭಾನುವಾರ ರಾತ್ರಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಸಂಪಾಜೆ ಅರಣ್ಯ ತನಿಖಾ ಠಾಣೆ ಮೂಲಕ ಸಾಗುತ್ತಿದ್ದ ಲಾರಿಯನ್ನು ತಡೆದ ತಪಾಸಣಾ ತಂಡ ಆರೋಪಿ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ನಿವಾಸಿ ಮಹಮ್ಮದ್ ಸಫ್ಯಾನ್ (26) ಎಂಬಾತನನ್ನು ಬಂಧಿಸಿತು.
ಲಾರಿ ಮತ್ತು ಹೆಬ್ಬಲಸು ಮರದ 12 ನಾಟಾಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಳ್ಳಲಾಗಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ.ಎ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಹಿಸೀನ್ ಬಾಷಾ ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮಾರ್ಗದರ್ಶನದಲ್ಲಿ ತನಿಖಾ ಠಾಣೆಯಲ್ಲಿ ಕಾರ್ಯನಿರತರಾಗಿದ್ದ ಉಪ ವಲಯ ಅರಣ್ಯಾಧಿಕಾರಿ ಬಸವರಾಜಪ್ಪ ಪ್ರಕರಣ ಪತ್ತೆ ಹಚ್ಚಿದರು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿನಯಕೃಷ್ಣ ಎಂ.ಸಿ, ಗಸ್ತು ಅರಣ್ಯಪಾಲಕರಾದ ನಾಗರಾಜ್ ಎಸ್, ಕಾರ್ತಿಕ್ ಡಿ., ವಾಹನ ಚಾಲಕರಾದ ಶಿವಪ್ರಸಾದ್, ಮನೋಜ್ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.