ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಕುಕ್ಕರ್ ಬಾಂಬ್ ಸ್ಪೋಟದ ವಿಚಾರವಾಗಿ ಐಸಿಸ್ ಸ್ಟೇಟ್ ಮೆಂಟ್ ಕುರಿತಂತೆ ಈಗ ಕಾಂಗ್ರೆಸ್ ನಿಲುವು ಏನು..? ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ವಿಜಯನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಐಸಿಸ್ ಸಂಘಟನೆಯವರು ನಾವು ಮಾಡಿದ್ದೇವೆ ಅಂತ ಹೇಳಿದ್ದಾರೆ. ಆದ್ರೆ ರಾಹುಲ್ ಗಾಂಧಿ ಅವರು ಇದೊಂದು ಕಾರ್ ಸ್ಫೋಟ ಅಂತಾ ಹೇಳಿದ್ರು. ಈಗ ಐಸಿಸ್ ನವರೇ ಒಪ್ಪಿಕೊಂಡಿರುವಾಗ ಕಾಂಗ್ರೆಸ್ ಎಷ್ಟರ ಮಟ್ಟಿಗೆ ತುಷ್ಠಿಕರಣ ರಾಜಕೀಯದಲ್ಲಿ ಮುಳುಗಿದೆ ಅನ್ನೋದು ಸ್ಪಷ್ಟವಾಗಿದೆ ಎಂದರು.
ಇನ್ನು ರಾಹುಲ್ ಗಾಂಧಿ ವಿರುದ್ಧವು ವಾಗ್ದಾಳಿ ನಡೆಸಿರುವ ಸಚಿವರು, ಕುಕ್ಕರ್ ಸ್ಪೋಟವನ್ನ ರಾಹುಲ್ ಗಾಂಧಿ ಅವರು ಕಾರ್ ಸ್ಫೋಟ ಅಂತ ಹೇಳಿದ್ರು. ಈ ಸ್ಪೋಟದ ಹಿಂದೆ ಭಯೋತ್ಪಾದಕರಿಗೆ ಪಾಕಿಸ್ತಾನದ ಕುಮ್ಮಕ್ಕಿರುವ ಬಗ್ಗೆ ಬಿಜೆಪಿ ಆರೋಪಿಸಿತ್ತು. ಪಾಕಿಸ್ತಾನವನ್ನು, ಕಪ್ಪು ಪಟ್ಟಿಗೆ ಹಾಕಬೇಕು ಅನ್ನೋದು ಭಾರತದ ನಿಲುವಾಗಿದೆ. ಆದರೆ ಭಾರತದ ಹಿತಾಸಕ್ತಿಯ ವಿರುದ್ಧ ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿವಿಯಲ್ಲಿ ಮಾತನಾಡಿದ್ದರು.
ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಮಟ್ಟದ ತುಷ್ಟಿಕರಣದ ರಾಜಕಾರಣ ಮಾಡಬಾರದು. ಕಾಂಗ್ರೆಸ್ ನ ಇಂತಹ ನಿಲುವುಗಳಿಂದಲೇ ದೇಶದ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಗೆ ಅಡ್ರಸ್ ಇಲ್ಲದಂತಾಗಿದೆ. ಕಾಂಗ್ರೆಸ್ ನಾಯಕರು ಕ್ಷಮೆ ಕೇಳಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶದ ಜೊತೆ ನಿಲ್ಲಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಕೈ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.