ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ಮತ್ತಿನಲ್ಲಿ ಪ್ರಯಾಣ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಮಾ.12ರಂದು ಅಕಾಲ್ ತಖ್ತ್ ಎಕ್ಸ್ಪ್ರೆಸ್ನಲ್ಲಿ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸೂಚನೆ ಮೇರೆಗೆ ಆತನನ್ನು ಬಂಧಿಸಿ, ಕೆಲಸದಿಂದ ವಜಾ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮಹಿಳೆ ತನ್ನ ಪತಿ ರಾಜೇಶ್ ಕುಮಾರ್ ಜೊತೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿತ್ತು. ಇಬ್ಬರೂ ಅಮೃತಸರ ಮೂಲದವರಾಗಿದ್ದಾರೆ.ಅಲ್ಲಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಅಕಲ್ ತಖ್ತ್ ಎಕ್ಸ್ಪ್ರೆಸ್ನ ಎ1 ಕೋಚ್ನಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಜಿಆರ್ಪಿ ಅಧಿಕಾರಿ ತಿಳಿಸಿದ್ದಾರೆ. ಮಹಿಳೆಯ ಕೂಗು ಕೇಳಿ ಸುತ್ತಮುತ್ತ ಜಮಾಯಿಸಿದ ಪ್ರಯಾಣಿಕರು ಕುಡಿದ ಮತ್ತಿನಲ್ಲಿದ್ದ ಟಿಟಿಇಯನ್ನು ಬಿಹಾರದ ನಿವಾಸಿ ಮುನ್ನಾ ಕುಮಾರ್ ಎಂದು ಗುರುತಿಸಿದ್ದಾರೆ.
ಲಕ್ನೋದ ಚಾರ್ಬಾಗ್ ರೈಲು ನಿಲ್ದಾಣವನ್ನು ತಲುಪಿದಾಗ ಟಿಟಿಇಯನ್ನು ಜಿಆರ್ಪಿಗೆ ಹಸ್ತಾಂತರಿಸಲಾಯಿತು. ಟಿಟಿಇ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎನ್ನಲಾಗಿದೆ.