ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಶಾಲಾ ಪಂದ್ಯಕ್ಕೆ ಮುನ್ನ ಚಂಡೀಗಢದ ಪಿಸಿಎ ಮೈದಾನದಲ್ಲಿ ನಡೆದ ಎರಡನೇ ಟಿ20 ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಕಟಕ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ತಂಡ ಈ ಬಾರಿ ಎಲ್ಲ ವಿಭಾಗಗಳಲ್ಲೂ ಕಳಪೆ ಆಟ ಪ್ರದರ್ಶಿಸಿದ್ದು, ಪಂದ್ಯ ಅಂತ್ಯಕ್ಕೆ 51 ರನ್ಗಳ ಸೋಲು ಎದುರಿಸಬೇಕಾಯಿತು. ಮೊದಲ ಪಂದ್ಯದಲ್ಲಿ ಮಿಂಚಿದ್ದ ತಂಡದ ಆತ್ಮವಿಶ್ವಾಸ ಈ ಬಾರಿ ಪಲ್ಟಿಯಾಗಿದ್ದು, ಸರಣಿ ಇದೀಗ 1-1ಕ್ಕೆ ಸಮವಾಗಿದೆ.
ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಬೀಸಿ 213 ರನ್ ಬಾರಿಸಿತು. ಆರಂಭಿಕ ಕ್ವಿಂಟನ್ ಡಿ ಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ಗಳ ಸ್ಫೋಟಕ ಅರ್ಧ ಶತಕ ಫಾರ್ಮ್ ತೋರಿಸಿದರೆ, ಕೆಳಕ್ರಮಾಂಕದಲ್ಲಿ ಡೊನೊವನ್ ಫೆರೀರಾ ಉಪಯುಕ್ತ 30 ರನ್ ನೀಡಿದರು. ಪ್ರತಿಯಾಗಿ ಭಾರತ ಬೌಲಿಂಗ್ ಸಂಪೂರ್ಣ ವಿಫಲವಾಯಿತು. ಬುಮ್ರಾ–ಅರ್ಷ್ದೀಪ್ ಜೊಡಿ ಎಂಟು ಓವರ್ಗಳಲ್ಲಿ 99 ರನ್ ಬಿಟ್ಟುಕೊಟ್ಟರೆ, ತಂಡ ಒಟ್ಟಾರೆ 22 ಹೆಚ್ಚುವರಿ ರನ್ 22 ಹೆಚ್ಚುವರಿ ರನ್ಗಳನ್ನು ಬಿಟ್ಟುಕೊಟ್ಟರು.
ಬ್ಯಾಟಿಂಗ್ನಲ್ಲೂ ಭಾರತದ ಟಾಪ್ ಆರ್ಡರ್ ಕುಸಿತ ಕಂಡಿತು. ಮೊದಲ ಎಸೆತದಲ್ಲೇ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡರು. ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಕೂಡ ವೇಗವಾಗಿ ಪೆವಿಲಿಯನ್ ಸೇರಿದರು. ಒಬ್ಬರೇ ಹೋರಾಡಿದ ತಿಲಕ್ ವರ್ಮಾ 62 ರನ್ ಗಳಿಸಿದರೂ, ಉಳಿದವರ ಬೆಂಬಲದ ಕೊರತೆ ಭಾರತಕ್ಕೆ ದುಬಾರಿಯಾಯಿತು. ಕೊನೆಗೂ ಟೀಂ ಇಂಡಿಯಾ 162 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು.
ಬೌಲಿಂಗ್ನಲ್ಲಿ ಆಫ್ರಿಕಾ ಪರ ಬಾರ್ಟ್ಮನ್ ನಾಲ್ಕು ವಿಕೆಟ್ ತೆಗೆಯುತ್ತಿದ್ದರೆ, ಸಿಪಾಮ್ಲಾ, ಎನ್ಗಿಡಿ ಹಾಗೂ ಯಾನ್ಸೆನ್ ತಲಾ ಎರಡು ವಿಕೆಟ್ ಪಡೆದರು. ಸರಣಿಯ ಮೂರನೇ ಪಂದ್ಯ ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿದ್ದು, ಎರಡೂ ತಂಡಗಳಿಗೂ ಇದು ಟರ್ನಿಂಗ್ ಪಾಯಿಂಟ್ ಆಗಬಹುದಾಗಿದೆ.

