ಹೊಸದಿಗಂತ ವರದಿ ಕಾರವಾರ:
ಚಲಿಸುತ್ತಿದ್ದ ರೈಲಿನಿಂದ ಇಳಿದು ಆಯತಪ್ಪಿ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯೋರ್ವನನ್ನು ಪಾಯಿಂಟ್ಸ್ಮನ್ ಗಣಪತಿ ನಾಯಕ್ ತಕ್ಷಣ ಧಾವಿಸಿ ಎಳೆದು ತಂದು ಬಚಾವ್ ಮಾಡಿದ ಘಟನೆ ಭಾನುವಾರ ಇಲ್ಲಿಯ ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ಸಂಖ್ಯೆ 16312 ರಲ್ಲಿ ಬೆಳಿಗ್ಗೆ 7.56 ಗಂಟೆಗೆ ಮೊಹಮ್ಮದ್ ಗೌಫೂರ್(22) ಎಂಬ ಪ್ರಯಾಣಿಕ ಚಲಿಸುವ ರೈಲಿನಿಂದ ಇಳಿದಿದ್ದು ರೈಲಿನ ಪಕ್ಕದಲ್ಲಿ ಎಳೆಯಲ್ಪಟ್ಟಿದ್ದಾನೆ.
ಘಟನೆಯನ್ನು ಗಮನಿಸಿದ ಗಣಪತಿ ನಾಯಕ್ ತಕ್ಷಣ ಸ್ಥಳಕ್ಕೆ ಧಾವಿಸಿ, ಪ್ರಯಾಣಿಕನನ್ನು ಹಿಡಿದು, ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರಕ್ಕೆ ಜಾರಿಬೀಳದಂತೆ ತಡೆದರು ಮತ್ತು ಅವರು ಸಂಪೂರ್ಣವಾಗಿ ಸುರಕ್ಷಿತವಾಗುವವರೆಗೆ ಚಲಿಸುವ ರೈಲಿನಿಂದ ದೂರವಿರುವಂತೆ ನೋಡಿಕೊಂಡಿದ್ದಾರೆ.
ಇದನ್ನೂ ಓದಿ:
ಸಿಸಿ ಟೀವಿಯಲ್ಲಿ ದಾಖಲಾದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಗಣಪತಿ ನಾಯಕರು ಪ್ರಯಾಣಿಕರ ಜೀವ ಉಳಿಸುವಲ್ಲಿ ತೋರಿದ ಅಸಾಧಾರಣ ಜಾಗರೂಕತೆ, ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪ್ರಯಾಣಿಕರ ಜೀವ ಉಳಿಸಿದ ಉತ್ತಮ ಕಾರ್ಯವನ್ನು ಶ್ಲಾಘಿಸಿರುವ ಕೊಂಕಣ ರೈಲ್ವೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ 10,000 ರೂ. ನಗದು ಬಹುಮಾನವನ್ನು ಘೋಷಿಸಿರುವುದಾಗಿ ನಿಗಮದ ಮಂಗಳೂರು ವ್ಯವಸ್ಥಾಪಕಿ, ಕೆ. ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.



