ಹೊಸದಿಗಂತ ಡಿಜಿಟಲ್ ಡೆಸ್ಕ್:
42 ವರ್ಷಗಳಿಂದ ಈ ರೈಲ್ವೇ ನಿಲ್ದಾಣದಲ್ಲಿ ಮಾನವನ ಸುಳಿವೇ ಇಲ್ಲದಂತಾಗಿದೆ. ಈ ರೈಲ್ವೇ ನಿಲ್ದಾಣ ಮುಚ್ಚಿದ್ದಕ್ಕೆ ನಿಜವಾದ ಕಾರಣ ತಿಳಿದರೆ ನಿಮ್ಮ ಮೈಂಡ್ ಬ್ಲಾಕ್ ಆಗುತ್ತೆ. ದೆವ್ವದ ಕಾಟದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 42 ವರ್ಷಗಳಿಂದ ಮುಚ್ಚಿ ಹೋಗಿದ್ದ ರೈಲು ನಿಲ್ದಾಣ ಕಥೆ ರೋಚಕವಾಗಿರೋದಂತೂ ನಿಜ.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬೇಗಂಕೋದರ್ ರೈಲು ನಿಲ್ದಾಣವು 1960ರ ದಶಕದಲ್ಲಿ ಜನರಂದ ಗಿಜಿಗಿಡುವ ತಾಣವಾಗಿತ್ತು. ಸಂತಾಲ್ ರಾಣಿ ಲಚನ್ ಕುಮಾರಿಯವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವೇ ಈ ರೈಲು ನಿಲ್ದಾಣ. ಈ ರೈಲು ನಿಲ್ದಾಣವನ್ನು ತೆರೆದ ನಂತರ ಸುತ್ತಮುತ್ತಲಿನ ಜನರ ಅವಕಾಶಗಳ ಬಾಗಿಲು ತೆರೆಯಿತು. ಈ ಪ್ರದೇಶವು ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿತ್ತು ಆದರೆ, ವಿಧಿ ಮತ್ತಿನ್ನೇನೋ ಬಯಸಿ ಜನರ ಈ ಸಂತೋಷ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. 1967 ರಲ್ಲಿ ಈ ನಿಲ್ದಾಣದ ಸ್ಟೇಷನ್ ಮಾಸ್ಟರ್ ರೈಲ್ವೇ ಹಳಿಯಲ್ಲಿ ದೆವ್ವವನ್ನು ನೋಡಿರುವುದಾಗಿ ಹೇಳಿಕೊಂಡರು. ಸ್ಟೇಷನ್ ಮಾಸ್ಟರ್ ಪ್ರಕಾರ, ಭೂತವು ಬಿಳಿ ಸೀರೆಯಟ್ಟು, ರಾತ್ರಿಯಲ್ಲಿ ರೈಲ್ವೆ ಹಳಿಯಲ್ಲಿ ತಿರುಗುತ್ತಿರುವುದನ್ನು ನೋಡಿರುವುದಾಗಿ ಪುಕಾರು ಹುಟ್ಟಿಸಿದರು.
ಈ ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಡುಗಿ ದೆವ್ವವಾಗಿದ್ದಾಳೆಂದು ಸ್ಥಳೀಯರ ಬಾಯಲ್ಲಿ ಮಾರ್ದನಿಸತೊಡಗಿತು. 20 ವರ್ಷಗಳಿಂದ ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡಿರುವ ಸುಭಾಶಿಶ್ ದತ್ತಾ ರಾಯ್ ಅವರು Quora ವೆಬ್ಸೈಟ್ನಲ್ಲಿ ಈ ನಿಲ್ದಾಣದ ಬಗ್ಗೆ ವಿವರವಾಗಿ ಬರೆದಿದ್ದಾರೆ. ದೆವ್ವದ ಭಯದಿಂದಾಗಿ ಆ ನಿಲ್ದಾಣದಲ್ಲಿ ಕೆಲಸ ಮಾಡಲು ಯಾರೋಬ್ಬರೂ ಮುಂದೆ ಬರದಂತಾಗಿ ಒಟ್ಟು 42 ವರ್ಷಗಳ ಕಾಲ ಅದನ್ನು ಮುಚ್ಚಬೇಕಾಯಿತು. ಇಂದಿಗೂ ಈ ನಿಲ್ದಾಣದ ಮೂಲಕ ರೈಲುಗಳು ಹಾದು ಹೋದಾಗ ರೈಲಿನೊಳಗೆ ನೀರವ ಮೌನ ಆವರಿಸುತ್ತದಂತೆ. ಸಂಜೆಯ ಹೊತ್ತಿಗೆ ನಿಲ್ದಾಣ ನಿರ್ಜನವಾಗುತ್ತದೆ.
ಕಥೆಗೆ ಪುಷ್ಠಿ ಕೊಟ್ಟ ಸ್ಟೇಷನ್ ಮಾಸ್ಟರ್, ಕುಟುಂಬದ ಸಾವು
ರೈಲ್ವೆ ಅಧಿಕಾರಿಗಳು ವದಂತಿಗಳನ್ನು ನಂಬದಿದ್ದರೂ, ಕೆಲವೇ ದಿನಗಳಲ್ಲಿ ಸ್ಟೇಷನ್ ಮಾಸ್ಟರ್ ಮತ್ತು ಅವರ ಕುಟುಂಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರವೇ ಭೂತದ ವದಂತಿ ಮತ್ತಷ್ಟು ಚಿಗುರಲು ಪ್ರಾರಂಭವಾಯಿತು. ಸ್ಟೇಷನ್ ಮಾಸ್ಟರ್ ನಿಧನದ ನಂತರ ಇಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರು ಕೆಲಸ ಮಾಡಲು ನಿರಾಕರಿಸಿದರು. ಇಲ್ಲಿಗೆ ನೌಕರರನ್ನು ನಿಯೋಜಿಸಲು ರೈಲ್ವೆ ಇಲಾಖೆ ಯತ್ನಿಸುತ್ತಿದ್ದರೂ ಯಾವೊಬ್ಬರೂ ಕೆಲಸ ಮಾಡಲೊಪ್ಪಲಿಲ್ಲ. ರೈಲ್ವೆಯು ಈ ನಿಲ್ದಾಣದಲ್ಲಿ ಎಲ್ಲಾ ಸೇವೆಗಳನ್ನು ನಿಲ್ಲಿಸಿದ ನಂತರ, ವಾಸ್ತವಿಕ ರೂಪದಲ್ಲಿ ಭೂತ ನಿಲ್ದಾಣವಾಯಿತು.
1990 ರ ದಶಕದಲ್ಲಿ, ಕೆಲವು ಸ್ಥಳೀಯರು ನಿಲ್ದಾಣವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿದರು. ಈ ನಿಲ್ದಾಣವನ್ನು ತೆರೆಯುವ ಅಗತ್ಯತೆಯ ಬಗ್ಗೆ ರೈಲ್ವೇ ಕೂಡ ಯೋಚಿಸಲಾರಂಭಿಸಿತು. ಸುಮಾರು 42 ವರ್ಷಗಳ ನಂತರ ಆ ಸಮಯ ಬಂದೇ ಬಿಡ್ತು 2009 ರಲ್ಲಿ ಆಗಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ಈ ನಿಲ್ದಾಣವನ್ನು ತೆರೆಯಲು ನಿರ್ಧರಿಸಲಾಯಿತು. ಬಳಿಕ ಇಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆ ಆರಂಭಿಸಿತು. ಇಂದಿಗೂ ನಿಲ್ದಾಣವು ನಿಲುಗಡೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಖಾಸಗಿ ವೆಂಟಿಂಗ್ ಕಂಪನಿಯಿಂದ ನಿರ್ವಹಿಸಲ್ಪಡುತ್ತದೆ. ಆದರೆ ಕೆಲಸ ಮಾಡಲು ಮಾತ್ರ ಯಾರೊಬ್ಬರೂ ಬರುತ್ತಿಲ್ಲ.
ಈ ಭಯವನ್ನು ಜನರಿಂದ ಹೋಗಲಾಡಿಸಲು ಪಶ್ಚಿಮ ಬಂಗಾಳದ ಬಿಗ್ಯಾನ್ ಮಂಚ ಎಂಬ ವಿಚಾರವಾದಿ ಸಂಘಟನೆಯ ಒಂಬತ್ತು ಸದಸ್ಯರ ತಂಡವು ಟಾರ್ಚ್, ಡಿಜಿಟಲ್ ದಿಕ್ಸೂಚಿ ಮತ್ತು ಕ್ಯಾಮೆರಾಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ, ಸತ್ಯವನ್ನು ಕಂಡುಹಿಡಿಯಲು ಪೊಲೀಸ್ ರಕ್ಷಣೆಯೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿತು. ಆಗ ಅವರಿಗೆ ಅರ್ಥವಾದ ಸತ್ಯವೆಂದರೆ ಇದೆಲ್ಲವೂ ಲೂಟಿಕೋರರ ಕೆಲಸ. ಭಯದ ವಾತಾವರಣ ಸೃಷ್ಟಿಸಿ ಜನರ ಲೂಟಿ ಮಾಡುವ ದುರುದ್ದೇಶದಿಂದ ಗೋಸ್ಟ್ ರೈಲು ನಿಲ್ದಾಣವಾಗಿ ಇದನ್ನು ಬದಲಾಯಿಸಿದ್ದಾರೆ.
ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇರೆಗೆ ಈ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುವುದನ್ನು ಹೆಚ್ಚಿಸಿದ್ದು, ಸಾರ್ವಜನಿಕ ವಿಳಾಸ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ.