ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸಮ್ಮರ್ ಕ್ಯಾಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಆಧುನಿಕ ಪ್ರಪಂಚದಲ್ಲಿ ದಿನೇ ದಿನೇ ಆವಿಷ್ಕಾರಗಳ ನಿರಂತರ ಪ್ರಕ್ರಿಯೆಯಿಂದ ಬದಲಾವಣೆಗಳು ಆಗುತ್ತಾ ಇದೆ. ಇದನ್ನು ಮನಗಂಡು ನಾವೂ ಸಹ ಜೊತೆಜೊತೆಯಲ್ಲಿ ಹೆಜ್ಜೆಯನ್ನಿಡದಿದ್ದರೆ ಮುಂದೆ ಸಾಗಲು ಸಾಧ್ಯವಿಲ್ಲ. ಕುಂಟುತ್ತಾ ಹೋಗುವ ಕಾಲವಿದಲ್ಲ. ವೇಗದ ನಡಿಗೆಗೆ ನಮ್ಮನ್ನು ನಾವು ಅನುಯೋಜ್ಯಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸುಂದರ ಬದುಕನ್ನು ಹಸನುಗೊಳಿಸುವ ಸಂಸ್ಕಾರದೊಂದಿಗಿನ ಆಧುನಿಕ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯು ಹೊಸತನವನ್ನು ಮೈಗೂಡಿಸಿಕೊಂಡಿರುವುದು ಶ್ಲಾಘನೀಯ ಎಂದು ಹಿರಿಯ ತಜ್ಞ ವೈದ್ಯ ಡಾ. ವಿ.ವಿ.ರಮಣ ಮುಳ್ಳೇರಿಯ ಹೇಳಿದರು.

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸೋಮವಾರ ಆರಂಭಗೊಂಡ ಭಾರತರತ್ನ ಅಟಲ್‌ಜೀಯವರ ಹೆಸರಿನಲ್ಲಿರುವ `ಅಟಲ್ ಟಿಂಕರಿಂಗ್ ಲ್ಯಾಬ್ ಸಮ್ಮರ್ ಕ್ಯಾಂಪ್ ಸ್ಟೆಮ್ನೋವೇಶನ್’ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಾದ ನೀವು ನಿಮ್ಮ ಭವಿಷ್ಯತ್ತಿನಲ್ಲಿ ಯಾವುದೇ ಕ್ಷೇತ್ರವನ್ನು ಆರಿಸಿಕೊಳ್ಳಿ, ಆದರೆ ಆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಆವಿಷ್ಕಾರಗಳೊಂದಿಗಿನ ಜ್ಞಾನಸಂಪಾದನೆಯನ್ನು ಮಾಡುತ್ತಲೇ ಇರಬೇಕು ಎಂದರು.

ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸನಿಹದ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಮೂರು ದಿನಗಳ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದ ರೂವಾರಿಗಳಾದ ಸ್ಟೆಮ್‌ರೋಬೋ ಟೆಕ್ನೋಲಜೀಸ್‌ನ ಸರ್ವೇಶ್ವರ್ ಮುರುಡೇಶ್ವರ, ಕೃಷ್ಣಮೂರ್ತಿ ಪೆರ್ವ, ಅಂಕಿತ್ ಶೆಟ್ಟಿ ಏತಡ್ಕ ಜೊತೆಗಿದ್ದರು. ಅಧ್ಯಾಪಿಕೆ ರಶ್ಮಿ ಪೆರ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು. ೯ನೇ ತರಗತಿಯ ಧೃತಿ ಭಟ್ ಕೊರೆಕ್ಕಾನ ಸ್ವಾಗತಿಸಿ, ಶ್ರೀಶ ಮುಗುಳ್ತಿಮೂಲೆ ವಂದಿಸಿದರು. ೯ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!