ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಪರಿಶೀಲನಾ ಸಭೆ ನಡೆಸಿದ್ದು, ಈ ವೇಳೆ ರಾಜ್ಯಗಳು ಜಾಗರೂಕರಾಗಿರಿ ಮತ್ತು ಕೋವಿಡ್-19 (COVID-19) ನಿರ್ವಹಣೆಗೆ ಸಿದ್ಧರಾಗಿರಿ ಎಂದು ಸಲಹೆ ನೀಡಿದ್ದಾರೆ.
ಆನ್ಲೈನ್ ಮೂಲಕ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಮಾಂಡವಿಯಾ, ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ಐಎಲ್ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕಿನ (ಎಸ್ಎಆರ್ಐ) ಪ್ರಕರಣಗಳ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ತುರ್ತು ಹಾಟ್ಸ್ಪಾಟ್ಗಳನ್ನು ಗುರುತಿಸಬೇಕು, ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಬೇಕು. ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಾತ್ರಿಪಡಿಸಬೇಕು ಎಂದಿದ್ದಾರೆ.
ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದು, ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ಅವರು ಒತ್ತು ನೀಡಿದರು.
ಕೊರೋನಾ ನಿರ್ವಹಣೆಗಾಗಿ ಹಿಂದಿನ ಉಲ್ಬಣಗಳ ಸಮಯದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಕಾರ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಹೇಳಿದರು.
ಇದರ ಭಾಗವಾಗಿ ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಡ್ರಿಲ್ಗಳನ್ನು ನಡೆಸಬೇಕು. ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಆರೋಗ್ಯ ಸಿದ್ಧತೆಯನ್ನು ಪರಿಶೀಲಿಸಬೇಕು ಎಂದು ಅವರು ರಾಜ್ಯ ಆರೋಗ್ಯ ಮಂತ್ರಿಗಳಿಗೆ ತಿಳಿಸಿದರು.