ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನದಿಂದ ದಿನಕ್ಕೆ ಬಿಸಿ ಗಾಳಿಯ ತೀವ್ರತೆ ಹೆಚ್ಚುತ್ತಿದ್ದು, ಅಧಿಕ ತಾಪಮಾನ ಜನತೆಯನ್ನು ಬಾಧಿಸುತ್ತಿದೆ. ತೆಲಂಗಾಣದ ಅದಿಲಾಬಾದ್ನ ಜಂಟಿ ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಉಟ್ನೂರು ಮಂಡಲದ ಪುಲಿಮಡುಗಿನಲ್ಲಿ ಒಬ್ಬರು ಮತ್ತು ಕೊಮಾರಂಭಿಂ ಜಿಲ್ಲೆಯ ಕಗಜನಗರದಲ್ಲಿ ಇಬ್ರಾಹಿಂ ಎಂಬ ಹಣ್ಣಿನ ವ್ಯಾಪಾರಿ ರಣಬಿಸಿಲು ಬಡಿದು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 5 ಮಂದಿ ಬಿಸಿಲ ಝಳಕ್ಕೆ ಸಾವನ್ನಪ್ಪಿದ್ದು, ಜನರು ಭಯಭೀತರಾಗಿದ್ದಾರೆ.
ಬಿಸಿ ವಾತಾವರಣದಲ್ಲಿ ಮನೆಯಿಂದ ಹೊರಗೆ ಬರುವ ಜನರು ಬೇಗನೆ ನಿರ್ಜಲೀಕರಣಗೊಳ್ಳುತ್ತಿದ್ದಾರೆ. ಶಾಖದ ಅಲೆಗಳ ಋಣಾತ್ಮಕ ಪರಿಣಾಮವನ್ನು ತಪ್ಪಿಸಲು, ವಿಶೇಷವಾಗಿ ದಿನದಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಬಹುತೇಕ ನೀರಿನ ಮೂಲಗಳು ಬತ್ತಿ ಹೋಗಿರುವುದರಿಂದ ಹಸು, ಎತ್ತುಗಳಿಗೆ ಕುಡಿಯಲು ನೀರು ಕೊಡಲು ಸಾಧ್ಯವಾಗುತ್ತಿಲ್ಲ ಅಂತಿದಾರೆ ರೈತರು. ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜನರು ಹೊರಗೆ ಹೋಗದಂತೆ ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಸೂಚಿಸಿದ್ದಾರೆ. ಕೂಲಿ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸಂಚಾರ ಸಿಬ್ಬಂದಿ, ಕ್ಷೇತ್ರ ಪತ್ರಕರ್ತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು, ಹೈ ರಿಸ್ಕ್ ಗುಂಪಿನಲ್ಲಿರುವ ಮಕ್ಕಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಬಿಸಿಲು ಬೀಳದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಹೈದ್ರಾಬಾದ್ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಏಪ್ರಿಲ್ನಲ್ಲಿ 40 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಆದಿಲಾಬಾದ್, ಕೊಮಾರಂ ಭೀಮ್, ಮಂಚಿರ್ಯಾಲು, ನಿರ್ಮಲ್, ನಿಜಾಮಾಬಾದ್, ಜಗಿತ್ಯಾಲ ಮತ್ತು ಕಾಮರೆಡ್ಡಿ ಜಿಲ್ಲೆಗಳಿಗೂ ಬಿಸಿಗಾಳಿ ಎಚ್ಚರಿಕೆ ನೀಡಿದೆ. ಸನ್ಬರ್ನ್ ಪರಿಣಾಮಗಳು ಕ್ರಮೇಣ ಹೆಚ್ಚಾಗಿ ಸಾವಿಗೆ ಕಾರಣವಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಸಹಕಾರದೊಂದಿಗೆ ದುರ್ಬಲ ವರ್ಗಗಳ ಕೊಳೆಗೇರಿ ಮತ್ತು ಕಾಲೋನಿಗಳಲ್ಲಿ ಓಆರ್ಟಿ (ಓರಲ್ ರೀಹೈಡ್ರೇಶನ್ ಥೆರಪಿ) ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.