ಹೊಸದಿಗಂತ ವರದಿ, ವಿಜಯಪುರ:
ವಿಧಾನಸಭೆ ಚುನಾವಣೆ ಹಿನ್ನೆಲೆ ನಗರದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅದ್ಧೂರಿ ರೋಡ್ ಶೋ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಂಡ ಬಸವಜಯಂತಿ ಉತ್ಸವದಲ್ಲಿ ಭಾಗಿಯಾದ ಬಳಿಕ ನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಮುಂದಾದರು.
ಶಿವಾಜಿ ವೃತ್ತದಿಂದ ಆರಂಭಗೊಂಡ ಬೃಹತ್ ರೋಡ್ ಶೋನಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಘೋಷ ಕೂಗುತ್ತ ಪಾಲ್ಗೊಂಡಿದ್ದರು.
ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಆತ್ಮೀಯತೆಯಿಂದ ಕೈ ಮುಗಿಯುತ್ತಾ ಸಾಗಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ, ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್, ಬಸವನಬಾಗೇವಾಡಿ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ, ಇಂಡಿ ಕ್ಷೇತ್ರ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ, ನಾಗಠಾಣ ಕ್ಷೇತ್ರ ಅಭ್ಯರ್ಥಿ ವಿಠ್ಠಲ ಕಟಕದೊಂಡ, ಮುದ್ದೇಬಿಹಾಳ ಕ್ಷೇತ್ರದ ಸಿ.ಎಸ್. ನಾಡಗೌಡ, ದೇವರ ಹಿಪ್ಪರಗಿ ಅಭ್ಯರ್ಥಿ ಶರಣಪ್ಪ ಸುಣಗಾರ, ಸಿಂದಗಿ ಅಭ್ಯರ್ಥಿ ಅಶೋಕ ಮನಗೂಳಿ, ಸೇರಿದಂತೆ ಅನೇಕರು ಇದ್ದರು.
ಶಿವಾಜಿ ವೃತ್ತದಿಂದ ಸಾಗಿದ ರೋಡ್ ಶೋ ಗಾಂಧಿವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಭಕ್ತ ಕನಕದಾಸ ವೃತ್ತಕ್ಕೆ ತಲುಪಿ ಸಮಾವೇಶಗೊಂಡಿತು. ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ರಾಹುಲ್ ಗಾಂಧೀ ಮಾತನಾಡಿದರು.