ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ(National Panchayati Raj Day) ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ್ದು 17000 ಕೋಟಿಗಿಂತಲೂ ಹೆಚ್ಚು ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾರತಕ್ಕೆ ಜೀವನವನ್ನು ಸುಲಭಗೊಳಿಸಲು ಸರ್ಕಾರ ಯೋಜನೆಗಳನ್ನು ಮಾಡಿದ್ದು ಪಂಚಾಯತ್ಗಳು ಅವುಗಳನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ಸಾಕಾರಗೊಳಿಸುತ್ತಿವೆ ಎಂದು ಹೇಳಿದ್ದಾರೆ . 2014 ರ ಮೊದಲು 6000 ಪಂಚಾಯತ್ ಘರ್ ನಿರ್ಮಿಸಲಾಗಿತ್ತು. ಆದರೆ ಕಳೆದ 8 ವರ್ಷಗಳಲ್ಲಿ 30,000 ಹೊಸ ಪಂಚಾಯತ್ ಘರ್ ನಿರ್ಮಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಅಷ್ಟೇ ಅಲ್ಲದೆ 2014ರ ನಂತರ 70,000 ಕೋಟಿ ರೂಪಾಯಿಗಿಂತ ಕಡಿಮೆಯಿದ್ದ ಪಂಚಾಯತ್ಗಳಿಗೆ ಬಜೆಟ್ನಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯು ಪ್ರತಿ ತಲೆಯ ಮೇಲೆ ಸೂರು, ಪ್ರತಿಯೊಬ್ಬ ಬಡವರಿಗೆ ಮನೆ, ಲಕ್ಷಾಂತರ ಭಾರತೀಯರಿಗೆ ಸ್ವಂತ ಮನೆಯನ್ನು ಹೊಂದುವ ಕನಸನ್ನು ತರುತ್ತಿದೆ. ಈ ಮೂಲಕ ರಾಷ್ಟ್ರದಾದ್ಯಂತ ಕುಟುಂಬಗಳಿಗೆ ಉತ್ತಮ ನಾಳೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಪಂಚಾಯಿತಿಗಳೂ ಸ್ಮಾರ್ಟ್ ಆಗುತ್ತಿವೆ. ಯೋಜನೆಗಳನ್ನು ರೂಪಿಸುವುದರಿಂದ ಹಿಡಿದು ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳಿಸುವವರೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
GeM ಪೋರ್ಟಲ್ ಗೂ ಚಾಲನೆ
ಮೋದಿ ಅವರು ವರ್ಚುವಲ್ ಆಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯ 4ಲಕ್ಷ 11 ಸಾವಿರ ಫಲಾನುಭವಿಗಳ ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದಾರೆ.
ಮೋದಿಯವರು ಇಂಟಗ್ರೇಟೆಡ್ ಇ-ಗ್ರಾಮ್ ಸ್ವರಾಜ್ ಮತ್ತು GeM ಪೋರ್ಟಲ್ ಗೂ ಚಾಲನೆ ನೀಡಿದ್ದಾರೆ. ಅಲ್ಲದೆ ಸುಮಾರು 35 ಲಕ್ಷ ಸ್ವಾಮಿತ್ವ ಆಸ್ತಿ ಕಾರ್ಡ್ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಜೊತೆಗೆ ಪ್ರಧಾನಿಯವರು ಸುಮಾರು ಎರಡು ಸಾವಿರದ ಮುನ್ನೂರು ಕೋಟಿ ರೂಪಾಯಿಗಳ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಹೊಸ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ. ಮೋದಿ ಅವರು ಸುಮಾರು ಏಳು ಸಾವಿರದ 853 ಕೋಟಿ ರೂಪಾಯಿಗಳ ಜಲ ಜೀವನ್ ಮಿಷನ್ನ 5 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಗಳಿಂದ 4 ಸಾವಿರಕ್ಕೂ ಹೆಚ್ಚು ಗ್ರಾಮಗಳ ಸುಮಾರು 9.5 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ.
ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಮತ್ತು ಹಲವಾರು ಕೇಂದ್ರ ಸಚಿವರು ಉಪಸ್ಥಿತರಿದ್ದರು.