ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರ ‘ಗೋಟ್ ಟೂರ್ 2025’ ಕಾರ್ಯಕ್ರಮದಲ್ಲಿ ಉಂಟಾದ ತೀವ್ರ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿರುವ ಅವರು, ಈ ಘಟನೆಯ ಜವಾಬ್ದಾರಿಯನ್ನು ರಾಜ್ಯ ನಾಯಕತ್ವ ಹೊರಬೇಕು ಎಂದು ಪ್ರತಿಪಾದಿಸಿದ್ದಾರೆ.
“ಈ ಕ್ರೀಡಾಕೂಟ ಹಾಳಾಗಲು ರಾಜ್ಯದಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯೇ ಕಾರಣ” ಎಂದು ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಮೆಸ್ಸಿ ಅವರ ಕಾರ್ಯಕ್ರಮದ ವೈಫಲ್ಯಕ್ಕೆ ರಾಜ್ಯ ಸರ್ಕಾರವನ್ನು ನೇರವಾಗಿ ಹೊಣೆ ಮಾಡಿರುವ ಅವರು, ಹೊಣೆಗಾರಿಕೆ ಯಾವಾಗಲೂ ಮೇಲಿನಿಂದಲೇ ಪ್ರಾರಂಭವಾಗಬೇಕು ಎಂದು ಒತ್ತಿ ಹೇಳಿದ್ದಾರೆ.
ಈ ಗದ್ದಲದ ಕುರಿತು ಮಾತನಾಡಿದ ಶರ್ಮಾ, “ರಾಜ್ಯದ ಗೃಹ ಸಚಿವರು ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸಬೇಕಿತ್ತು. ಕಾರ್ಯಕ್ರಮ ಆಯೋಜಕರ ಬಂಧನವನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಮೊದಲ ಜವಾಬ್ದಾರಿಯನ್ನು ರಾಜ್ಯದ ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರು ಹೊರಬೇಕು” ಎಂದು ಕಠಿಣ ಹೇಳಿಕೆ ನೀಡಿದ್ದಾರೆ.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ, “ಈ ಘಟನೆಯು ರಾಜ್ಯ ನಾಯಕತ್ವವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಬೇಕು. ಮೆಸ್ಸಿ ಇಡೀ ಜಗತ್ತಿಗೆ ಆದರ್ಶ. ಮಮತಾ ಬ್ಯಾನರ್ಜಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಂಗಾಳದಲ್ಲಿ ಪ್ರತಿದಿನ ಮುಗ್ಧ ಜನರು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ವಿಷಯ” ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ನೀಡಿದ್ದಾರೆ.

