ಹೊಸದಿಗಂತ ವರದಿ, ಹಾವೇರಿ:
ಶಿಗ್ಗಾವಿ ಸವಣೂರು ಸಂತ ಶಿಶುನಾಳ ಶರೀಫ್, ಕನಕದಾಸರು ಸಾರಿದ ಭಾವೈಕ್ಯತೆಯ ಭೂಮಿ. ನಮ್ಮ ನಡುವೆ ಸಂಬಂಧಗಳಿವೆ. ಎಲ್ಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಮೂಲಭೂತ ಸೌಲಭ್ಯಗಳು ಎಲ್ಲ ವರ್ಗದವರಿಗೂ ದೊರೆಯಬೇಕು ಅಂದಾಗ ಮಾತ್ರ ಅದು ಅಭಿವೃದ್ಧಿ ಎಂದೆನಿಸಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವಿಯಲ್ಲಿ ಗುರುವಾರ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ. ಬಡವರಿಗೆ ಮನೆ ಹಂಚಿಕೆ ಸೇರಿದಂತೆ ಎಲ್ಲ ಯೋಜನೆಗಳನ್ನು ಎಲ್ಲ ವರ್ಗದ ಬಡವರಿಗೆ ಸರಿ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಎಲ್ಲ ಸಮಾಜದವರನ್ನು ಸರಿ ಸಮಾನವಾಗಿ ಕಾಣಲಾಗುತ್ತಿದೆ ಎಂದು ತಿಳಿಸಿದರು.
ಜನರ ನಂಬಿಕೆ, ವಿಶ್ವಾಸ ಹಾಗೂ ಭಾವನೆಗಳಿಗೆ ಪೂರಕವಾಗಿ ನಾವು ಕೆಲಸ ಮಾಡಬೇಕು. ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ಧೇನೆ. ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದೆ. ಎಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿದೆ. ಜಾತಿ, ಮಥ, ಪಂಥವನ್ನು ನೋಡದೇ ಎಲ್ಲ ಸಮುದಾಯದ ಅಭಿವೃದ್ಧಿ ಯಾರು ಮಾಡುತ್ತಾರೆ ಎನ್ನುವದನ್ನು ಗಮನಿಸುತ್ತಾರೆ. ಯಾವ ವ್ಯಕ್ತಿಗೆ ಮತ ನೀಡಿದರೆ ಯೋಜನೆಗಳು ಮುಂದುವರೆಯುತ್ತವೆ ಎನ್ನುವುದನ್ನು ಸಹ ಗಮನಿಸಿ ಆ ವ್ಯಕ್ತಿಗೆ ಮತವನ್ನು ನೀಡುತ್ತಾರೆ ಎಂದು ಹೇಳಿದರು.
ನಾವು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದೇವೆ. ಅದರ ಫಲವನ್ನು ಎಲ್ಲ ಸಮುದಾಯದವರು ಪಡೆಯುತ್ತಾರೆ. ಶಿಗ್ಗಾವಿ ಸವಣೂರಿನಲ್ಲಿ ೩೨ ಸಾವಿರ ರೈತರಿಗೆ ಇದರ ಲಾಭ ದೊರೆತಿದೆ, ವಿದ್ಯಾನಿಧಿ ೮ ಸಾವಿರ ಮಕ್ಕಳಿಗೆ ದೊರೆಯುತ್ತಿದೆ ಎಂದರು.
ನಾನು ಎಲ್ಲ ಸಮುದಾಯ ಮಠಗಳು, ಮಸೀದಿಗಳ ಅಭಿವೃದ್ಧಿಗೆ ಅನುದಾನ ನಿಡಿದ್ದೇನೆ. ನೀವೆಲ್ಲರೂ ಸೇರಿ ಈ ಬಾರಿ ನನಗೆ ಬೆಂಬಲ ಸೂಚಿಸಲು ಬಂದಿದ್ದೀರಿ. ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಬೆಂಬಲ ಸಹಕಾರ ಇರಲಿ ಎಂದರು.