ಹೊಸದಿಗಂತ ವರದಿ, ಹೊನ್ನಾವರ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹನುಮಾನ್ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸಿ ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನ, ಗರಡಿ ಸ್ಥಾಪನೆ ಮಾಡುತ್ತೇವೆ. ಈ ಮೂಲಕ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹನುಮಾನ್ ಯಾರ ಆಸ್ತಿಯೂ ಅಲ್ಲ. ಹಿಂದುತ್ವ ನಮ್ಮ ಆಸ್ತಿ ನಾವೂ ಹಿಂದುಗಳು.ನಾನು ಶಿವ, ಶಿವನ ಕುಮಾರ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತದೆ. ದೇಶದ್ರೋಹ ಮಾಡುವ ಸಂಘಟನೆಯನ್ನು ಮಾತ್ರ ಶಮನ ಮಾಡುವ ಬಗ್ಗೆ ಹೇಳಿದ್ದೇವೆ. ಪ್ರಧಾನಿ ಮೋದಿ ಈ ದೇಶದಲ್ಲಿ ಬಡವರಿಗೆ ಏನು ಸಹಾಯ ಮಾಡಿದ್ದೇವೆ, ಜನರ ಖಾತೆಗೆ ಹದಿನೈದು ಲಕ್ಷ ಹಾಕಿದ ಬಗ್ಗೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿಗರು ಭಾವನೆ ಮೇಲೆ ಹೋದರೆ ಕಾಂಗ್ರೆಸ್ ಬದುಕಿನ ಮೇಲೆ ಹೋಗುತ್ತಿದೆ. ನಾನು ಹಿಂದೂ, ಸಿದ್ದರಾಮಯ್ಯ ಕೂಡ ಹಿಂದೂ. ಎಲ್ಲಾ ಹಿಂದು ಧರ್ಮದ ಆಚರಣೆಗಳನ್ನು ನಾವು ಪಾಲನೆ ಮಾಡುತ್ತೇವೆ. ಬಂಗಾರಪ್ಪ ಸಿಎಂ ಆದಾಗ ಆರಾಧನ ಸ್ಕೀಮ್ ತಂದು ಹಳ್ಳಿಯಲ್ಲಿರುವ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದರು. ನಾವು ಕೂಡ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ದೇವಸ್ಥಾನ, ಆಂಜನೇಯ ದೇವಸ್ಥಾನಗಳ ಅಭಿವೃದ್ಧಿ ಮಾಡುವುದಾಗಿ ಹೇಳಿದರು.