ಹೊಸ ದಿಗಂತ ವರದಿ, ಮಡಿಕೇರಿ:
ಬಿಜೆಪಿ ಚುನಾವಣಾ ಪ್ರಕ್ರಿಯೆ ಆರಂಭದಿಂದ ಇದುವರೆಗೂ ನಮ್ಮ ಜತೆಯಲ್ಲೇ ಇದ್ದಾರೆ. ಹೀಗಾಗಿ ಈ ಬಾರಿಯೂ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಮಾದಾಪುರದ ತಮ್ಮ ನಿವಾಸದಲ್ಲಿ ‘ಹೊಸದಿಗಂತ’ದೊಂದಿಗೆ ಮಾತನಾಡಿದ ಅವರು, ಈ ಬಾರಿ ನನ್ನದು 7ನೇ ಚುನಾವಣೆ. 5 ಬಾರಿ ಗೆದ್ದಿದ್ದೇನೆ. 6ನೇ ಬಾರಿಯೂ ಗೆಲ್ಲುತ್ತೇನೆ. 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೂಟ್ಕೇಸ್ ರಾಜಕಾರಣ: ಕೊಡಗಿನಲ್ಲಿ ಈ ಬಾರಿ ಸೂಟ್ಕೇಸ್ ರಾಜಕಾರಣ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಸೂಟ್ಕೇಸ್ ನೀಡಿ ಟಿಕೆಟ್ ಪಡೆದುಕೊಂಡಿದ್ದರು. ಹಾಗೆಯೇ ಮತದಾರರಿಗೂ ಹಣದ ಹೊಳೆ ಹರಿಸಿದ್ದಾರೆ. ಈ ಸೂಟ್ಕೇಸ್ ರಾಜಕಾರಣ ಆರಂಭದಲ್ಲಿ ಕೊಂಚ ಆತಂಕಕ್ಕೀಡು ಮಾಡಿತ್ತು. ಆದರೆ ನಮ್ಮ ಕಾರ್ಯಕರ್ತರು ನಮ್ಮ ಪರ ಗಟ್ಟಿಯಾಗಿ ನಿಂತಿದ್ದರು. ಹೀಗಾಗಿ ಈ ಸಲವೂ ನಮ್ಮ ಗೆಲುವು ಶತಸಿದ್ಧ ಎಂದರು.
ಕೊಡಗಿನಲ್ಲಿ ಜಾತಿ ರಾಜಕಾರಣಕ್ಕೆ ಯಾರೂ ಮನ್ನಣೆ ನೀಡಿಲ್ಲ. ನೀಡುವುದೂ ಇಲ್ಲ ಎಂದ ಅವರು, ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ದೃಢ ವಿಸ್ವಾಸದಿಂದ ನುಡಿದರು.