ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ ಪಡೆಯುವಲ್ಲಿ ತೀವ್ರ ಹಿನ್ನಡೆ ಸಾಧಿಸಿರುವುದು ಮತ್ತು ಪಕ್ಷದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಎಂ. ಗಣೇಶ್ ರಾಜಿನಾಮೆ ಸಲ್ಲಿಸಿದ್ದಾರೆ. ಚುನಾವನಾ ಫಲಿತಾಂಶ ಹೊರ ಬಿದ್ದ ತಕ್ಷಣವೇ ನಡೆದ ಬೆಳವಣಿಗೆಗಳ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಿಗೆ ಕೆ.ಎಂ. ಗಣೇಶ್ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಗಣೇಶ್, ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಅಭ್ಯರ್ಥಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಜೆಡಿಎಸ್ ಸಕ್ರಿಯವಾಗಿ ಇರುತ್ತಿದ್ದರೆ ಇಂದು ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ತನ್ನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಕೆ.ಎಂ. ಗಣೇಶ್ ಹೇಳಿದ್ದಾರೆ.
ಚುನಾವಣೆಗೆ ಕೆಲವು ದಿನಗಳು ಇರುವಾಗಲೇ ಗಣೇಶ್ ಅವರು ಕಾಂಗ್ರೆಸ್ ಸೇರಲಿರುವುದಾಗಿ ಸುದ್ದಿಯಾಗಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು.