ಹೊಸ ದಿಗಂತ ವರದಿ, ಹಾವೇರಿ :
ಜನರ ತೀರ್ಪನ್ನು ಒಪ್ಪಿಕೊಳ್ಳುವೆ. ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಮತ್ತೆ ಪುನರಾಗಮಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಹಾವೇರಿಯ ಇಂಜನೀಯರಿಂಗ್ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗೆಲುವಿಗಾಗಿ ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಆದರೂ ನಮಗೆ ಬಹುಮತ ದೊರೆತಿಲ್ಲ. ನಮ್ಮ ಕಾರ್ಯಕರ್ತರು, ಎಲ್ಲ ನಾಯಕರು, ಪ್ರಧಾನಮಂತ್ರಿಗಳೂ ಸೇರಿದಂತೆ ಶ್ರಮವಹಿಸಿ ಕೆಲಸ ಮಾಡಿದ್ದೇವು ಆದರೂ ನಮಗೆ ಬಹುಮತ ದೊರೆಯಲಿಲ್ಲ ಎಂದರು.
ಕಾಂಗ್ರೆಸ್ಗೆ ಬಹುಮತ ದೊರೆತಿದೆ. ನಮ್ಮ ತಪ್ಪುಗಳನ್ನು ವಿಶ್ಲೇಷಣೆ ಮಾಡಿ, ಅದರ ಬಗ್ಗೆ ಕುಳಿತು ಸಮಾಲೋಚನೆ ಮಾಡುತ್ತೇವೆ. ಒಂದು ರಾಷ್ಟ್ರೀಯ ಪಕ್ಷವಾಗಿ ನಮ್ಮ ಕುಂದು ಕೊರತೆಯನ್ನು ಸರಿದೂಗಿಸಿಕೊಂಡು ಸಂಸತ್ ಚುನಾವಣೆಗೆ ಮರು ಸಿದ್ಧತೆ ಮಾಡಿಕೊಳ್ಳುತ್ತೇವೆ. ಪಕ್ಷವನ್ನು ಪುನಃ ಸಂಘಟಿಸಿ ನಾವು ಮತ್ತೆ ಪುನರಗಾಮಿಸುತ್ತೇವೆ ಎಂದು ಹೇಳಿದರು.
ಸೋಲುವುದಕ್ಕೆ ಇಲ್ಲಿ ಹಲವಾರು ಕಾರಣಗಳಿವೆ. ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ. ಪ್ರತಿ ಕ್ಷೇತ್ರದಲ್ಲಿ ಕೂಲಂಕುಷವಾಗಿ ವಿಚಾರಣೆ ಮಾಡಿ ನೋಡುತ್ತೇವೆ. ಮತ್ತೆ ಪುಟೆದೆಳುವ ಪಕ್ಷ ಬಿಜೆಪಿ ಪಕ್ಷ. ಮುಂದಿನ ಎಂಪಿ ಚುನಾವಣೆಗೆ ತಯಾರು ಮಾಡ್ತೇವಿ.
ಕಾಂಗ್ರೆಸ್ ಗೆಲವಿಗೆ ಕಾರಣ ಅವರು ಹೇಳ ಬೇಕು. ಅವರು ಬಹಳ ವ್ಯವಸ್ಥಿತವಾಗಿ ಚುನಾವಣೆ ರಣತಂತ್ರವನ್ನು ಮಾಡಿಕೊಂಡಿದ್ದರು ಎನ್ನುವುದೊಂದು ಕಾರಣವನ್ನು ನಾನು ಹೇಳಬಲ್ಲೆ ಎಂದು ಕಾಂಗ್ರೆಸ್ ಗಡಲುವಿನ ಕುರಿತು ತಿಳಿಸಿದ ಸಿಎಂ.
ನಿರಂತರವಾಗಿ ನಾಲ್ಕನೆ ಭಾರಿ ಆಯ್ಕೆ ಮಾಡಿದ ಶಿಗ್ಗಾವಿ ಕ್ಷೇತ್ರದ ಜನರಿಗೆ ಕೋಟಿ ಕೋಟಿ ಧನ್ಯವಾದಗಳು.ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಜಯ ಆಗಿದೆ. ಈ ಕ್ಷೇತ್ರದ ಅಭಿವೃದ್ಧಿ ಜವಾಬ್ದಾರಿ ನನ್ನ ಮೇಲೆ ಇನ್ನು ಹೆಚ್ಚಾಯಿತು. ನಾಡಿನ ಜನರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇನೆ.