ಹೊಸದಿಗಂತ ವರದಿ,ನಾಗಮಂಗಲ :
ತಾಲೂಕಿನ ಆದಿಚುಂಚಗಿರಿ ಮಹಾಸಂಸ್ಥಾನಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಶುಕ್ರವಾರ ನಡೆದ ಅಮವಾಸ್ಯೆ ಪೂಜಾಕಾರ್ಯದಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರ ದಂಡೇ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಮತ್ತು ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡಿತು.
ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಅಮವಾಸ್ಯೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವು ಶಾಸಕರು ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರ ಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ, ಮಹಾಗಣಪತಿ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಎಲ್ಲಾ ಅಧಿದೇವತೆಗಳಿಗೆ ಪೂಜೆ ಸಲ್ಲಿಸಿದರಲ್ಲದೆ, ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾಸಮಾದಿಗೆ ಪೂಜೆ ನೆರವೇರಿಸಿದರು.
ಪೂಜೆಯಲ್ಲಿ ಭಾಗಿಯಾದ ಶಾಸಕರು : ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಗಡಿ ಶಾಸಕ ಬಾಲಕೃಷ್ಣ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಹುಣಸೂರು ಶಾಸಕ ಹರೀಶ್ಗೌಡ, ಭಟ್ಕಳ ಹೊನ್ನಾವರ ಶಾಸಕ ಮಂಕಾಳ ಎಸ್.ವೈದ್ಯ, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಕಾರವಾರದ ಅಂಕೋಲಾ ಶಾಸಕ ಸತೀಶ್ ಶೈಲ್ ಅಮವಾಸ್ಯೆ ಪೂಜೆಯಲ್ಲಿ ಭಾಗಿಯಾಗಿದ್ದರು.
ಶ್ರೀ ಕಾಲಭೈರವೇಶ್ವರನಿಗೆ ಅಮಾವಾಸ್ಯೆ ಪ್ರಯುಕ್ತ ಜರುಗುವ ಪಂಚಾಮೃತಾಭಿಷೇಕ, ಭಸ್ಮಾಭಿಷೇಕ, ಬಿಲ್ವಾಭಿಷೇಕ, ಪುಷ್ಪಾಭಿಷೇಕ, ಸುಗಂಧ ದ್ರವ್ಯಗಳೊಂದಿಗೆ ಶ್ರೀಗಳು ಪೂಜೆ ನರೆವೇರಿಸಿದರು. ದೇವಾಲಯದಲ್ಲಿ ಬೆಳ್ಳಿರಥೋತ್ಸವ ಕೂಡ ನಡೆಯಿತು.
ಪೂಜೆಗೆ ಆಗಮಿಸಿದ್ದ ವಿವಿಧ ಕ್ಷೇತ್ರಗಳ ನೂತನ ಶಾಸಕರಿಗೆ ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳು ಸಂಪ್ರದಾಯದಂತೆ ಶಾಲು ಹೊದಿಸಿ, ಹಾರ ಹಾಕಿ ಫಲ ತಾಂಬೂಲ ನೀಡಿ ಆಶೀರ್ವದಿಸಿದರು. ಶ್ರೀಗಳೊಂದಿಗೆ ಕೆಲ ಕಾಲ ಚರ್ಚೆ ನಡೆಸಿದ ಶಾಸಕರು ಶ್ರೀಮಠದಲ್ಲಿ ನಡೆಯುವ ಸಾಮೂಹಿಕ ಭೋಜನದಲ್ಲಿ ಪ್ರಸಾದ ಸೇವಿಸಿ ತೆರಳಿದರು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ಹಲವು ಸಾಧು ಸಂತರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರೂ ಸಹ ಪಾಲ್ಗೊಂಡಿದ್ದರು.