ಹೊಸದಿಗಂತ ವರದಿ ಮಡಿಕೇರಿ:
ಏಕರೂಪ ನಾಗರಿಕ ಸಂಹಿತೆಯಿಂದ ಕೊಡವ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಾಂಪ್ರದಾಯಿಕ ಕೋವಿ ಹಕ್ಕಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ 22ನೇ ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿದೆ.
ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರಿಗೆ ಪತ್ರ ಬರೆದಿರುವ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಏಕರೂಪ ನಾಗರಿಕ ಸಂಹಿತೆಯ ನೀತಿಗಳು ಅನಾದಿ ಕಾಲದಿಂದ ಬಂದಿರುವ ಕೊಡವರ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗಬಾರದು ಮತ್ತು ಕೊಡವ ಬುಡಕಟ್ಟು ಜನಾಂಗದ ಹೆಗ್ಗುರುತುಗಳನ್ನು ಮೊಟಕುಗೊಳಿಸಬಾರದು ಎಂದು ಗಮನ ಸೆಳೆದಿದ್ದಾರೆ.
ಕೊಡವರು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಸರ್ಕಾರದ ಕುಟುಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಬಹುಪತ್ನಿತ್ವದ ನಿರ್ಮೂಲನೆ ಮತ್ತು ಜನಸಂಖ್ಯೆ ನಿಯಂತ್ರಣ ನೀತಿಯ ಅನುಷ್ಠಾನವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದೀಗ ಪ್ರಸ್ತಾಪಿಸಲ್ಪಟ್ಟಿರುವ ಏಕರೂಪ ನಾಗರಿಕ ಸಂಹಿತೆಗೆ ಕೊಡವರ ವಿರೋಧವಿಲ್ಲ, ಆದರೆ ಕೆಲವೊಂದು ಆತಂಕಗಳಿವೆ. ಸಿಖ್ ಹಾಗೂ ಪಾರ್ಸಿಗಳಂತಹ ಧಾರ್ಮಿಕ ಅಲ್ಪಸಂಖ್ಯಾತರು ಸಾಂಪ್ರದಾಯಿಕ ಚಟುವಟಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಕುರಿತು ಈಗಾಗಲೇ ಧ್ವನಿ ಎತ್ತಿದ್ದಾರೆ.
ಇದೇ ಮಾದರಿಯಲ್ಲಿ ಕೊಡವ ಬುಡಕಟ್ಟು ಜನರಿಗೂ ತಮ್ಮ “ಧಾರ್ಮಿಕ ಸಂಸ್ಕಾರ ಗನ್” ವಿನಾಯಿತಿ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಸಂಸತ್ನಲ್ಲಿ ಸಂಹಿತೆ ಮಂಡಿಸುವ ಸಂದರ್ಭ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗದಂತೆ, ಕೊಡವರ ಶ್ರೇಷ್ಠ ಸಂಪ್ರದಾಯವಾದ ಸಪ್ತಪದಿ ಇಲ್ಲದ ಮದುವೆಗೆ ಮತ್ತು ಸಾಂಪ್ರದಾಯಿಕ ಗನ್ ವಿನಾಯಿತಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಿಖ್ಖರ “ಕಿರ್ಪಾನ್” ಮತ್ತು ಗೂರ್ಖಾಗಳ “ಕುಕ್ರಿ” ಯಂತೆ ಬುಡಕಟ್ಟು ಕೊಡವರು ಕೋವಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ತಮ್ಮ ಸಾಂಪ್ರದಾಯಿಕ ಆಯುಧಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಿದ್ದಾರೆ. ಭಾರತ ಸರ್ಕಾರವು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕೊಡವರಿಗೆ ಕೋವಿ ಹಕ್ಕಿನ ವಿಶೇಷ ಸವಲತ್ತುಗಳನ್ನು ನೀಡಿದೆ.
ಸಮರ ವೀರರಾಗಿರುವ ಕೊಡವರು ದೇಶವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸೇನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ, ರಾಷ್ಟ್ರೀಯ ಭದ್ರತೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಕೋವಿ ಹೊಂದುವುದು ಕೊಡವರ ಧಾರ್ಮಿಕ ಸಂಸ್ಕಾರವೆಂದು ಪರಿಗಣಿಸಲಾಗಿದೆ. ಕೊಡವ ಸಮುದಾಯಕ್ಕೆ ಬುಡಕಟ್ಟು ಸಂಸ್ಕೃತಿ ಮತ್ತು ಕೋವಿ ಮೇಲಿನ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಕೊಡವ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸುವ ಅನಿವಾರ್ಯತೆ ಕೊಡವರಿಗಿದೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯಲ್ಲಿ ವಿಶಿಷ್ಟ ಕೊಡವ ಗುರುತನ್ನು ದುರ್ಬಲಗೊಳಿಸುವುದಿಲ್ಲ ಎನ್ನುವ ಅಂಶವನ್ನು ಖಚಿತಪಡಿಸಿಕೊಳ್ಳುವ ಅನಿವಾರ್ಯತೆ ರಾಷ್ಟ್ರೀಯ ಏಕತೆಗೆ ಬದ್ಧರಾಗಿರುವ ನಮಗೆ ಎದುರಾಗಿದೆ ಎಂದು ನಾಚಪ್ಪ ಪತ್ರದಲ್ಲಿ ವಿವರಿಸಿದ್ದಾರೆ.
ಅಲ್ಲದೆ ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವ ಅಂಶಗಳನ್ನು ಅಳವಡಿಸಲು ಮತ್ತು ಕೈಬಿಡಲು ನಿರ್ಧರಿಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುವ ಮೂಲಕ ನಮಗಿರುವ ಆತಂಕವನ್ನು ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.