ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಅವರ ಸಾವಿನ ನಂತರ ಉಂಟಾದ ಹಿಂಸಾಚಾರ ವ್ಯಾಪಕ ಹರಡಿದ್ದು, ಧರ್ಮನಿಂದನೆಯ ಆರೋಪದ ಮೇಲೆ ಹಿಂದು ವ್ಯಕ್ತಿಯನ್ನು ಕಟ್ಟಿಹಾಕಿ, ಹೊಡೆದು, ಸಜೀವದಹನ ಮಾಡಲಾಗಿದೆ.
ಈ ಹತ್ಯೆಯನ್ನು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಬಲವಾಗಿ ಖಂಡಿಸಿದೆ.’ನವ ಬಾಂಗ್ಲಾದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ’ ಎಂದು ಎಚ್ಚರಿಕೆ ನೀಡಿದೆ. ಹತ್ಯೆಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಎಚ್ಚರಿಸಿದೆ.
‘ಮೈಮೆನ್ಸಿಂಗ್ನಲ್ಲಿ ಹಿಂದು ವ್ಯಕ್ತಿಯ ಹತ್ಯೆಯನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಹೊಸ ಬಾಂಗ್ಲಾದೇಶದಲ್ಲಿ ಅಂತಹ ಹಿಂಸಾಚಾರಕ್ಕೆ ಸ್ಥಳವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಬಿಡುವುದಿಲ್ಲ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತಿಳಿಸಿದೆ.
ಬಾಂಗ್ಲಾದೇಶಿಗರು ಎಲ್ಲಾ ರೀತಿಯ ಗುಂಪು ಹಿಂಸಾಚಾರವನ್ನು ವಿರೋಧಿಸಬೇಕು ಎಂದು ಸರ್ಕಾರ ಹೇಳಿದೆ. ಇದು ಕೆಲವು ಸೂಕ್ಷ್ಮ ಅಂಶ. ಎಲ್ಲಾ ಹಿಂಸಾಚಾರ, ಬೆದರಿಕೆ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಗಳ ನಾಶದ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಯೂನಸ್ ಸರ್ಕಾರ ಹೇಳಿದೆ.
ಮೃತ ಯುವಕ ದೀಪು ಚಂದ್ರ ದಾಸ್ ಭಾಲುಕಾ ಉಪಜಿಲಾದ ದುಬಾಲಿಯಾ ಪ್ಯಾರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆತ ಯುವ ಗಾರ್ಮೆಂಟ್ ಫ್ಯಾಕ್ಟರಿ ಕೆಲಸಗಾರನಾಗಿದ್ದ. ಸ್ಥಳೀಯ ನಿವಾಸಿಗಳ ಗುಂಪೊಂದು ಆತ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮೇಲೆ ಹಲ್ಲೆ ನಡೆಸಿತು. ಬಳಿಕ ಆತನನ್ನು ಕಟ್ಟಿಹಾಕಿ ಬೆಂಕಿ ಹಚ್ಚಿದ್ದಾರೆ.

