ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಅಹಮದಾಬಾದ್ನಲ್ಲಿ’ತಿರಂಗ ಯಾತ್ರೆ’ಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ನಾವು ಬದುಕುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
“ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ, ಈಗ ನಾವು ದೇಶಕ್ಕಾಗಿ ಸಾಯಲು ಸಾಧ್ಯವಿಲ್ಲ. ಆದರೆ, ದೇಶಕ್ಕಾಗಿ ನಾವು ಬದುಕುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ 2022ರ ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸಿಕೊಂಡರು ಮತ್ತು ತ್ರಿವರ್ಣ ಧ್ವಜವನ್ನು ಹಾರಿಸದ ಮನೆ ಇಲ್ಲ, ಇಡೀ ರಾಷ್ಟ್ರವು ತಿರಂಗಮಯವಾಗಿರುತ್ತದೆ ಎಂದೂ ಸಂತಸಪಟ್ಟರು.
‘ಆಜಾದಿ ಕಾ ಅಮೃತ್ ಮಹೋತ್ಸವ’ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಡೀ ರಾಷ್ಟ್ರದಲ್ಲಿ ದೇಶಭಕ್ತಿ ಸಾರಲು ಪ್ರಯತ್ನಿಸಿದರು ಎಂದು ಹೇಳಿದರು.
ʼಆಗಸ್ಟ್ 15,2023ರಂದು, ‘ಆಜಾದಿ ಕಾ ಅಮೃತ್ ಮಹೋತ್ಸವ’ ಮುಕ್ತಾಯವಾಗಲಿದೆ. ಆದರೆ 15 ಆಗಸ್ಟ್ 2023 ರಿಂದ 15 ಆಗಸ್ಟ್ 2047ರ ವರೆಗೆ ನಾವು ‘ಆಜಾದಿ ಕಾ ಅಮೃತ ಕಾಲ’ ಅನ್ನು ಆಚರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷದವರೆಗೆ ನಾವು ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿಸಲು ಬದುಕುತ್ತೇವೆ’ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಗುಜರಾತ್ ಇನ್ಸ್ಟಿಟ್ಯೂಟ್ ಆಫ್ ಹೌಸಿಂಗ್ ಮತ್ತು ಎಸ್ಟೇಟ್ ಡೆವಲಪರ್ಸ್ ಆಯೋಜಿಸಿದ್ದ ಕ್ರೆಡೈ ಸಾಮೂಹಿಕ ಮರ ನೆಡುವ ಕಾರ್ಯಕ್ರಮದಲ್ಲಿ ಶಾ ಅವರು ಭಾಗವಹಿಸಿದ್ದರು.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಅವರು, ಗುಜರಾತ್ನ ಕಛ್ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಶನಿವಾರ ಉದ್ಘಾಟಿಸಿದರು.