ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಬೋಸ್ ಅವರು ಬುಧವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ವೋಟ್ ಬ್ಯಾಂಕ್ ಹಾಗೂ ಒಡೆದಾಳುವ ರಾಜಕಾರಣದಿಂದ ಪಕ್ಷವು ಭವಿಷ್ಯದ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, ತಮ್ಮ ಮತ್ತು ಪಕ್ಷದ ಸಿದ್ಧಾಂತಗಳು ಹೊಂದಾಣಿಕೆಯಾದರೆ ಬೇರೆ ಯಾವುದೇ ಪಕ್ಷಕ್ಕೆ ಸೇರಲು ಸಿದ್ಧ ಎಂದು ಹೇಳಿದ್ದಾರೆ.
‘ನಾವು ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತು ನಾನು ಪಕ್ಷಕ್ಕೆ ಸಾಕಷ್ಟು ಪ್ರಸ್ತಾವನೆಗಳನ್ನು ನೀಡಿದ್ದೇನೆ. ಆದರೆ, ಅವರು ಅದನ್ನು ಸ್ವೀಕರಿಸಲಿಲ್ಲ. ಬಂಗಾಳದಲ್ಲಿ ಪಕ್ಷ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ಧ್ರುವೀಕರಣ, ಮತ-ಬ್ಯಾಂಕ್ ರಾಜಕೀಯ ಮತ್ತು ಒಡೆದಾಳುವ ನೀತಿಯು ಪಕ್ಷದ ಅವಕಾಶಗಳನ್ನು ಹಾಳುಮಾಡಿವೆ’ ಎಂದು ಬೋಸ್ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಬರೆದುಕೊಂಡಿರುವ ಬೋಸ್, ‘ನನ್ನ ಚರ್ಚೆಗಳು (ಬಿಜೆಪಿಯೊಂದಿಗೆ) ಬೋಸ್ ಅವರ ಒಳಗೊಳ್ಳುವ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿತ್ತು. ನಾನು ಈ ಸಿದ್ಧಾಂತವನ್ನು ಬಿಜೆಪಿ ವೇದಿಕೆ ಮೂಲಕ ದೇಶಾದ್ಯಂತ ಪ್ರಚಾರ ಮಾಡಲು ಬಯಸಿದ್ದೆ. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳನ್ನು ನಾವು ಒಳಗೊಳ್ಳಬೇಕಿದೆ. ಆದರೆ, ಬಿಜೆಪಿ ಅದನ್ನು ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ತಿಳಿಸಿದ್ದಾರೆ.