ಹೊಸದಿಗಂತ ವರದಿ ದಾವಣಗೆರೆ:
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯನ್ನು ರಾವಣನಂತೆ ಚಿತ್ರಿಸಿ ಪೋಸ್ಟರ್ ಪ್ರಕಟಿಸಿರುವ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿಯವರು ಎಲ್ಲಾ ಸಮುದಾಯಗಳ ಹಿತ ಕಾಯುವ ಮನೋಭಾವ ಹೊಂದಿದ್ದಾರೆ. ದೇಶದಲ್ಲಿ 4 ಸಾವಿರ ಕಿಲೋಮೀಟರ್ ಗಳ ಭಾರತ ಜೋಡೋ ಪಾದಯಾತ್ರೆ ಕೈಗೊಂಡು ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಇಂತಹವರ ಬಗ್ಗೆ ಬಿಜೆಪಿಯವರು ಅವಹೇಳನಕಾರಿ ಪೋಸ್ಟರ್ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ವಿರೋಧವಿದ್ದರೆ ಸೈದ್ಧಾಂತಿಕವಾಗಿ ಹೋರಾಡಬೇಕು. ಅದನ್ನು ಬಿಟ್ಟು ಪೋಸ್ಟರ್ ಹಂಚುವ ಪ್ರವೃತ್ತಿ ಒಳ್ಳೆಯದಲ್ಲ.
ಅದಾನಿ, ಅಂಬಾನಿ ಪರವಾಗಿರುವ ಬಿಜೆಪಿ ನಾಯಕರಿಗೆ ಬಡವರ ಆಶಾಕಿರಣವಾಗಿರುವ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯ್ಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮುಖಂಡರಾದ ಕೆ.ಚಮನ್ ಸಾಬ್, ಮುದೇಗೌಡ್ರು ಗಿರೀಶ್, ರಾಘವೇಂದ್ರ ಗೌಡ, ಶುಭಮಂಗಳ, ದಾಕ್ಷಾಯಣಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.