ಹೊಸದಿಗಂತ ವರದಿ ಮೈಸೂರು:
ಪುರಾತನ ಯೋಗ ಮತ್ತು ನೇಚರೋಪತಿ ಆರೋಗ್ಯವನ್ನು ಸಂರಕ್ಷಣೆ ಮಾಡುವಂತಹ ಅಸ್ತ್ರಗಳು. ಹೆಚ್ಚು ಹಣ ಖರ್ಚು ಮಾಡದೆ ರೋಗವನ್ನು ನಿಯಂತ್ರಣ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗದ ಆವರಣದಲ್ಲಿ ಬುಧವಾರ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ದಸರಾ ಉತ್ಸವದಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು ಸಾಂಸ್ಕೃತಿಕ ನಗರ ಮಾತ್ರವಲ್ಲದೆ, ಯೋಗದ ನಗರ ಎಂದೂ ಪ್ರಸಿದ್ಧಿ ಪಡೆದಿದೆ. ರಾಜರ ಕಾಲದಿಂದಲೂ ಕೂಡ ಯೋಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ದೇಶಕ್ಕೆ ಮಾದರಿ ಆಡಳಿತ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಕೋನವನ್ನು ಆಧರಿಸಿ ಈ ಬಾರಿಯ ದಸರಾವನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಲಾಗಿದೆ ಎಂದರು.
ಹಣ, ಆಸ್ತಿ, ಸಂಪತ್ತು ಕಳೆದುಕೊಂಡರೆ ಮರಳಿ ಪಡೆದುಕೊಳ್ಳಬಹುದು. ಆದರೆ, ಆರೋಗ್ಯ ಕೆಟ್ಟರೆ ಅದು ತುಂಬಲಾರದ ನಷ್ಟ. ಪ್ರತಿನಿತ್ಯ ನಿಯಮಿತವಾದ ವ್ಯಾಯಾಮ, ನಡಿಗೆ, ಕ್ರೀಡಾಭ್ಯಾಸದ ಜೊತೆಗೆ ಮನಸ್ಸನ್ನು ಉಲ್ಲಾಸದತ್ತ ಕೊಂಡೊಯ್ಯುವ ಯೋಗಭ್ಯಾಸವೂ ಕೂಡ ರೋಗಕ್ಕೆ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ ಎಂದು ಅಭಿಪ್ರಾಯ ತಿಳಿಸಿದರು.
ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಉಪಯುಕ್ತವಾಗಿದೆ. ಆರೋಗ್ಯದಲ್ಲಿ ಸಮತೋಲನತೆ ಕಾಯಲು ನಿರಂತರ ಯೋಗಾಭ್ಯಾಸ ಸಹಕಾರಿಯಾಗಿದೆ. ವಿಶ್ವದ ಎಲ್ಲಾ ಜನರು ಒಂದೇ ಕುಟುಂಬದವರು ಎಂಬ ಸಂದೇಶವನ್ನು ಯೋಗ ನೀಡುತ್ತದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಚಿವನಾಗಿದ್ದ ಕಾಲದಿಂದಲೂ ಯೋಗಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. 2017 ರಲ್ಲಿ 50 ಸಾವಿರಕ್ಕೂ ಹೆಚ್ಚು ಯೋಗಪಟುಗಳೊಂದಿಗೆ ಅಂತಾರಾಷ್ಟ್ರೀಯ ಯೋಗದಿನವನ್ನು ರೇಸ್ ಕೋರ್ಸ್ನಲ್ಲಿ ಆಚರಿಸಿ ಗಿನ್ನಿಸ್ ದಾಖಲೆ ಮಾಡಲಾಗಿದೆ ಎಂದು ಮೆಲಕು ಹಾಕಿದರು.
ಈ ವೇಳೆ ಗುರು ಶ್ರೀಶರತ್ ಜೋಯಿಸ್ ಮತ್ತು ಅವರ ವಿದೇಶಿ ಶಿಷ್ಯ ವೃಂದದವರು ಅಷ್ಟಾಂಗ ಯೋಗಾಭ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷರಾದ ಹೇಮಂತ್, ಮಹೇಶ್, ಉಪ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷರಾದ ಡಿ.ಎಂ.ರಾಣಿ, ಕಾರ್ಯದರ್ಶಿ ಡಾ.ಪುಷ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.