ಹೊಸದಿಗಂತ ವರದಿ ಹಾಸನ:
ತೆಂಗಿನ ಕಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದಿರುವ ಗಲಾಟೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಬೇಲೂರು ತಾಲ್ಲೂಕಿನ ಕೋಡಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಹಳೆಬೀಡು ಹೋಬಳಿಯ ಕೋಡಿಕೊಪ್ಪಲು ನಿವಾಸಿಗಳಾದ ಕಾಂತಾರಾಜು, ಗಂಗಾಧರ್, ರತ್ನ, ಹಲ್ಲೆಗೊಳಗಾದ ವ್ಯಕ್ತಿಗಳು. ಗಂಗಾಧರ್ ಹಾಗೂ ಆತನ ತಂಗಿ ಗೀತಾ ಇಬ್ಬರ ನಡುವೆ ತೆಂಗಿನಕಾಯಿ ವಿಚಾರಕ್ಕೆ ಜಗಳ ನಡೆದಿದ್ದು, ತಡರಾತ್ರಿ ಗಂಗಾಧರ್ ಅವರ ಮನೆಗೆ ಸಹೋದರಿ ಗೀತಾ ಹಾಗೂ ಮಕ್ಕಳು, ಸ್ನೇಹಿತರು ನುಗ್ಗಿ ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಶ್ರೀಧರ್, ನಿಂಗರಾಜು, ಸುರೇಶ್, ದಿನೇಶ್, ವೆಂಕಟೇಶ್ ಸಚಿನ್, ಸಾಗರ್, ಉಮೇಶ್, ಗೀತಾ ಎಂಬುವವರು ಹಲ್ಲೆ ನಡೆಸಿದ ವ್ಯಕಿಗಳಾಗಿದ್ದು, ಘಟನೆಯ ಬಳಿಕ ಪರಾರಿಯಾಗಿದ್ದಾರೆ. ಅದಲ್ಲದೆ ಹಲ್ಲೆ ನಡೆಸಿರುವ ಗೀತಾ ಕೂಡ ಹಳೇಬೀಡು ಪೊಲೀಸ್ ಠಾಣೆಗೆ ತೆರಳಿ ಐದು ಲಕ್ಷ ರೂ ಹಣ ಕಳವು ಮಾಡಿರುವ ಆರೋಪ ಮಾಡಿದ್ದಾರೆ.
ಗಲಾಟೆಯಲ್ಲಿ ಹಲ್ಲೆ ನಡೆಸಿರುವ ಗೀತಾ ಪುತ್ರ ಶ್ರೀಧರ್ ಕೂಡ ಗಂಭೀರ ಗಾಯಗೊಂಡಿದ್ದು, ಈ ಹಲ್ಲೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ಗಾಯಾಳುಗಳು ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.