CRIME| ಕಾರಿನಲ್ಲಿ ಹಣ ಇಡೋಕು ಮುನ್ನ ಈ ದೃಶ್ಯ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೈಕ್‌ನಲ್ಲಿ ಬಂದ ಖದೀಮರು ನಿಂತಿದ್ದ ಬಿಎಂಡಬ್ಲ್ಯು ಕಾರಿನ ಗಾಜು ಒಡೆದು 13.75 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರಿನಲ್ಲಿ ಹಣ ಇಡುವವವರಿಗೆ ಆತಂಕ ಶುರುವಾಗಿದೆ.

ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಒಬ್ಬ ಕಾರಿನ ಕಿಟಕಿ ಗಾಜನ್ನು ಒಡೆದು ಹಣ ಎಗರಿಸುತ್ತಿದ್ದರೆ, ಮತ್ತೊಬ್ಬ ಬೈಕ್‌ ಓಡಿಸಲು ಸಜ್ಜಾಗಿದ್ದಾನೆ. ಹಣ ಸಿಗುತ್ತಿದ್ದಂತೆ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿರುವ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.

ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಮುತಗಟ್ಟಿ ಗ್ರಾಮದಲ್ಲಿ ನಿವೇಶನ ನೋಂದಣಿ ಮಾಡಿಸಲು ತಂದಿದ್ದ ಹಣ ಮೋಹನ್ ಬಾಬು ಅವರದ್ದು. ಮಧ್ಯಾಹ್ನ 1.30ರ ಸುಮಾರಿಗೆ ಬಾಬು ಮತ್ತು ಅವರ ಸಂಬಂಧಿ ರಮೇಶ್ ತಮ್ಮ ಕಾರನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಬಳಿಯ ಗಿರಿಯಾಸ್ ಔಟ್ ಲೆಟ್ ಬಳಿ ನಿಲ್ಲಿಸಿದ್ದರು. ಮಧ್ಯಾಹ್ನ 2.30ಕ್ಕೆ ಕಾರಿನ ಗಾಜು ಒಡೆದು ನಗದು ನಾಪತ್ತೆಯಾಗಿರುವುದು ಬಾಬುಗೆ ಗೊತ್ತಾಗಿದೆ.

ಘಟನೆ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!