ಹೊಸದಿಗಂತ ವರದಿ ಹುಬ್ಬಳ್ಳಿ:
ಹುಲಿ ಉಗುರಿನ ಪೆಂಡೆಂಟ್ ಬಳಸಿರುವ ವಿಚಾರಕ್ಕೆ ಸಂಬಂಧಿದಂತೆ ಅರಣ್ಯ ಅಧಿಕಾರಿಗಳು ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಅಳಿಯ, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನಿಚಾಸಕ್ಕೆ ಭೇಟಿ ನೀಡಿ ಶೋಧ ನಡೆಸಿ ಪೆಂಡೆಂಟ್ ಮಾದರಿಯ ಸರ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ಅವರ ನೇತೃತ್ವದಲ್ಲಿ 10-12 ಜನರ ತಂಡ ಭೇಟಿ ನೀಡಿ ಹುಲಿ ಉಗರಿನ ಮಾದರಿಯ ಪೆಂಡೆಂಟ್ ಸರ ಜಪ್ತಿಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್., ರಜತ್ ಉಳ್ಳಾಗಡ್ಡಿಮಠ ಅವರ ಬಳಿ ಇರೋ ಪೆಂಡೆಂಟ್ ಮಾದರಿ ಚೈನ್ ಪರಿಶೀಲನೆ ಮಾಡಿದ್ದೇವೆ. ಈಗಾಗಲೇ ಆ ಪೆಂಡೆಂಟ್ ವಶಕ್ಕೆ ಪಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಹಿಸಲಾಗುವುದು. ಅಲ್ಲಿಂದ ಪರೀಕ್ಷೆ ನಡೆದು ವರದಿ ಬರಲು ಕನಿಷ್ಠ ಒಂದು ತಿಂಗಳವಾಗುತ್ತದೆ. ಒಂದು ವೇಳೆ ಅದು ನಿಜವಾದ ಹುಲಿ ಉಗುರಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಕುರಿತ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಾತನಾಡಿ, ನನ್ನ ಮದುವೆ ಸಮಯದಲ್ಲಿ ನಾನು ಧರಿಸಿದ್ದ ಒಂದು ಪೆಂಡೆಂಟ್ ನಿಜವಾದ ಹುಲಿ ಉಗುರಿನಿಂದ ಮಾಡಿದ್ದಲ್ಲ. ಅದು ಫೈಬರ್ ಮಿಶ್ರಿತ ವಸ್ತುವಿನಿಂದ ಮಾಡಿದ ಪೆಂಡೆಂಟ್ ಆಗಿದೆ. ನಾನು ಮೂಲತಃ ಒಬ್ಬ ಗಾಂಧೀವಾದಿ, ಅಹಿಂಸಾವಾದಿ. ಹೀಗಿರುವಾಗ ಒಂದು ಪ್ರಾಣಿಯನ್ನು ಹಿಂಸಿಸಿ ಶೋಕಿ ಮಾಡುವ ಅವಶ್ಯಕತೆ ಇಲ್ಲ. ತನಿಖೆ ಸಂಪೂರ್ಣ ಸಹಕರಿಸುವೆ ಎಂದು ತಿಳಿಸಿದರು.