ಹೊಸದಿಗಂತ ವರದಿ,ಮಂಡ್ಯ :
ಮಾನಸಿಕ ಅಸ್ವಸ್ಥನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನ ಶಿವಪುರದ ರೈಲು ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ನೀಲಕಂಠನಹಳ್ಳಿಯ ಲೇ. ನಾಗರಾಜು ಪುತ್ರ ಎನ್. ನವೀನ್ಕುಮಾರ್ (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನವೀನ್ಕುಮಾರ್ ತನ್ನ ಚಿಕ್ಕಪ್ಪ ಪುಟ್ಟಸ್ವಾಮಿ ಎಂಬುವರ ಬಳಿ ಮೈಸೂರಿನಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದನು. ಮದ್ದೂರು ರೈಲು ನಿಲ್ದಾಣದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ತಮಿಳುನಾಡಿನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ತೂತುಕುಡಿ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನ ದೇಹದ ಮೇಲೆ ರೈಲು ಹರಿದ ಪರಿಣಾಮವಾಗಿ ಆತನ ಕಾಲುಗಳ ಮೇಲೆ ಚಕ್ರ ಹರಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿದ ಮಂಡ್ಯ ರೈಲ್ವೆ ಪೊಲೀಸರು ಮಹಜರು ನಡೆಸಿದ ನಂತರ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.