ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗಡಿ ದಾಟಿ ಭಾರತದೊಳಗೆ ಬಂದಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಅಧಿಕಾರಿಗಳು ಭಾನುವಾರ ವಾಪಸ್ ಕಳುಹಿಸಿದ್ದಾರೆ. ಮ್ಯಾನ್ಮಾರ್ನ ಚಿನ್ ರಾಜ್ಯದ ತುಯಿಬುಲ್ನಲ್ಲಿರುವ ಶಿಬಿರವನ್ನು ನಾಗರಿಕ ಸಶಸ್ತ್ರ ಪಡೆಗಳು ವಶಪಡಿಸಿಕೊಂಡ ನಂತರ 29 ಮ್ಯಾನ್ಮಾರ್ ಸೈನಿಕರು ನವೆಂಬರ್ 16ರಂದು ಮಿಜೋರಾಂನ ಚಂಫೈ ಜಿಲ್ಲೆಗೆ ನುಸುಳಿ ಬಂದಿದ್ದರು.
ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್ಗಳು ಭಾನುವಾರ 29 ಮ್ಯಾನ್ಮಾರ್ ಸೈನಿಕರನ್ನು ಮಿಜೋರಾಂನ ಚಂಫೈನಿಂದ ಮಣಿಪುರದ ಮೋರೆಹ್ ಪಟ್ಟಣಕ್ಕೆ ಏರ್ಲಿಫ್ಟ್ ಮಾಡಿ ಅವರನ್ನು ಮ್ಯಾನ್ಮಾರ್ನ ಮಿಲಿಟರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬಯೋಮೆಟ್ರಿಕ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ಬಳಿಕ , ಭಾರತೀಯ ಅಧಿಕಾರಿಗಳು ಎಲ್ಲಾ 29 ಸೈನಿಕರನ್ನು ನೆರೆಯ ದೇಶದ ತಮು (ಮೋರೆಹ್ ಗಡಿಯ ಎದುರು) ನಲ್ಲಿ ಮ್ಯಾನ್ಮಾರ್ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ.