ಹೊಸ ದಿಗಂತ ವರದಿ,ಕಲಬುರಗಿ:
ಕರ್ನಾಟಕ ರಾಜ್ಯದಲ್ಲಿ ಕಳೆದ 6 ತಿಂಗಳುಗಳಿಂದ ಕಾನೂನು- ಸುವ್ಯವಸ್ಥೆ ದಿನೇದಿನೇ ಹದಗೆಟ್ಟಿದೆ. ಒಂದು ಕಡೆ ಜಿಹಾದಿ ಮನಸ್ಥಿತಿಯವರು ಸರಕಾರದ ರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದರೆ ಸರಕಾರವು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ತನ್ನ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಹಾಗೂ ಬಿಜೆಪಿ ರಾಜ್ಯ ವೈದ್ಯರ ಸೆಲ್ ಸದಸ್ಯೆ ಡಾ. ಸುಧಾ ಆರ್ ಹಾಲಕಾಯಿ ತಿಳಿಸಿದರು.
ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರು ಮಹಿಳೆಯನ್ನು ವಿವಸ್ತ್ರಗೊಳಿಸಿದ್ದು, ಕಾನೂನು- ಸುವ್ಯವಸ್ಥಗೆ ಹಿಡಿದ ಕೈಗನ್ನಡಿ. ರಾಜ್ಯ ಸರಕಾರವು ಎಲ್ಲ ರಂಗದಲ್ಲೂ ವಿಫಲವಾಗಿದೆ. ಈ ರಂಗದಲ್ಲೂ ವೈಫಲ್ಯ ಅನುಭವಿಸಿದೆ. ತಕ್ಷಣದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಅವರು ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ಪೊಲೀಸರು ಕೂಡ ಪ್ರತಿಭಟನೆಗೆ ಇಳಿದಿರುವುದು ಕಂಡುಬರುತ್ತಿದೆ. ಇದರ ಅರ್ಥ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಕ್ಷಣದಲ್ಲಿ ಡಾ.ಪರಮೇಶ್ವರ್ ಅವರನ್ನು ಬದಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಕೈಯಲ್ಲಿ ಮಹಿಳೆಯರ ರಕ್ಷಣೆ ಆಗುತ್ತಿಲ್ಲ. ಸ್ವತಃ ಬೆಳಗಾವಿಯ ಮಹಿಳಾ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಣ್ಣನೇರದಲ್ಲೇ ಇಂಥ ಕೃತ್ಯ ಆಗಿದೆಯೆಂದರೆ ಇದರ ಹಿಂದೆ ಕಾಂಗ್ರೆಸ್ಸಿನ ಅನೇಕ ಶಕ್ತಿಗಳು ಇರುವುದು ಎದ್ದು ಕಾಣುತ್ತಿದೆ. ಆದಷ್ಟು ಬೇಗ ಈ ರಾಜ್ಯ ಸರಕಾರ ತೊಲಗಬೇಕು. ಇಲ್ಲವೇ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.