ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳ ವಿರುದ್ಧ ಸುಪ್ರೀಂಕೋರ್ಟ್ಗೆ ದೂರು ನೀಡಿರುವ ಕೇರಳ ಸರ್ಕಾರದ ನಡೆಗೆ ಬಿಜೆಪಿ ತೀವ್ರ ಆಕ್ರೋಸ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ವಿ. ಮುರಳೀಧರನ್, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದಾಗಲೂ ಅದನ್ನು ವಿರೋಧಿಸಲಾಗಿತ್ತು. ಮಹಿಳೆಯರು ಹಾಗೂ ಬುಡಕಟ್ಟು ಸಮುದಾಯಗಳ ಬಗ್ಗೆ ಸಿಪಿಎಂಗೆ ಇರುವ ತಾರತಮ್ಯವನ್ನು ಇದು ಎತ್ತಿತೋರಿಸುತ್ತಿದೆ ಎಂದಿದ್ದಾರೆ.
ಎಡಪಕ್ಷವು ಮಹಿಳಾ ವಿರೋಧಿಯಾಗಿದೆ. 2022 ರವರೆಗೂ ಆ ಪಕ್ಷದ ಪಾಲಿಟ್ ಬ್ಯುರೊದಲ್ಲಿ ಮಹಿಳಾ ಸದಸ್ಯರು ಇರಲಿಲ್ಲ. ಮಹಿಳೆಯರ ಬಗ್ಗೆ ಸಿಪಿಎಂನ ನಾಯಕತ್ವಕ್ಕೆ ಇರುವ ತಾತ್ಸಾರಕ್ಕೆ ಇದುವೇ ಸಾಕ್ಷಿಯಾಗಿದೆ. ದೇಶದಲ್ಲಿ ಮಸೂದೆಗಳಿಗೆ ಒಪ್ಪಿಗೆ ಸಿಗದೇ ಇರುವುದು ಇದೇ ಮೊದಲೇನಲ್ಲ. ಆದರೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ವಿರುದ್ಧ ಕೋರ್ಟ್ಗೆ ದೂರು ನೀಡಲಾಗಿದೆ ಎಂದಿರುವ ಅವರು, ರಾಷ್ಟ್ರಪತಿಗಳ ಈ ಕ್ರಮವು ಸಂವಿಧಾನಕ್ಕೆ ಅನುಗುಣವಾಗಿಯೇ ಇದೆ ಎಂದು ಹೇಳಿದ್ದಾರೆ.
ಕೇರಳ ರಾಜ್ಯ ವಿಧಾನಸಭೆ ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ ಎಂಬ ಕಾರಣಕ್ಕೆ ರಾಷ್ಟ್ರಪತಿ ಮುರ್ಮು ಅವರು ವಿರುದ್ಧ ಕೇರಳದ ಎಲ್ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.