ದಿಗಂತ ವರದಿ ಮಂಡ್ಯ :
ಕಾಂಗ್ರೆಸ್ಸಿಗರು ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್ನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದವರನ್ನು ಸಹೋದರರ ಹೆಸರಿನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಕ್ಷಣೆ ಮಾಡಲು ಮುಂದಾಗಿದ್ದರು ಎಂದು ದೂರಿದರು.
ರಾಮೇಶ್ವರಂ ಹೊಟೇಲ್ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣವನ್ನು ವ್ಯವಹಾರಿಕ ಈರ್ಷೆಯಿಂದ ಬೇರೆ ಹೊಟೇಲ್ನವರು ಕೃತ್ಯವನ್ನು ಮಾಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದರು. ಸ್ಪರ್ಧಾತ್ಮಕ ಪೈಪೋಟಿಯಿಂದ ಬೇರೆ ಹೊಟೇಲ್ನವರು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗಲೂ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿದರು. ಬೆಂಗಳೂರಿನ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ನಾವು ಒತ್ತಾಯಿಸಿದ್ದೆವು. ಆದರೂ ಸರ್ಕಾರ ವಹಿಸಲು ಹಿಂದೇಟು ಹಾಕಿತು. ವಿಷಯ ತಿಳಿದು ಎನ್ಐಎ ಸ್ವತಃ ಧಾವಿಸಿ ತನಿಖೆ ಆರಂಭಿಸಿತ್ತು. ಮೂರು ದಿನಗಳ ಬಳಿಕ ಸರ್ಕಾರ ಎನ್ಐಗೆ ವಹಿಸುವ ಕೆಲಸ ಮಾಡಿತು ಎಂದು ದೂರಿದರು.