ಹೊಸದಿಗಂತ ವರದಿ, ಮೈಸೂರು:
ಅರಮನೆಯಲ್ಲಿದ್ದವರು ಬೀದಿಗಳಿಗೆ ಬರಲ್ಲ, ಗ್ರಾಮಗಳಿಗೂ ಬರಲ್ಲ ಎನ್ನುವ ಅಪಪ್ರಚಾರದ ಮಾತುಗಳನ್ನಾಡುತ್ತಿದ್ದಾರೆ. ಇಂತಹ ಅಪಪ್ರಚಾರ ಮಾತುಗಳಿಗೆ ಕಿವಿಗೊಡಬೇಕಾದ ಅಗತ್ಯವಿಲ್ಲ .ಕೆಲಸದ ಮೂಲಕವೇ ಉತ್ತರ ಕೊಡುವ ಕಾಲ ಬರಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರಿನ ನಜರ್ಬಾದ್,ದೇವರಾಜ ಮೊಹಲ್ಲಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಜನರ ನಿರೀಕ್ಷೆ,ಬಯಕೆಯಂತೆ ಕೆಲಸ ಮಾಡಲು ಬಂದಿದ್ದೇನೆ. ಅರಮನೆಯಲ್ಲಿದ್ದವರು ಬೀದಿಗೆ ಬಂದು ಕೆಲಸಮಾಡುತ್ತಾರೆಯೇ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಬೀದಿಗೆ ಬಂದು ಕೆಲಸ ಮಾಡುವುದು ಗೊತ್ತಿದೆ. ನಮ್ಮ ಕೆಲಸ ಯಾವ ರೀತಿ ಇರುತ್ತದೆ ಎಂಬುದನ್ನು ಹೇಳುವುದಕ್ಕಿಂತ ಮಾಡಿ ತೋರಿಸುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳಲ್ಲಿ ಭಾರತವನ್ನು ಶಕ್ತಿಶಾಲಿ,ಆರ್ಥಿಕವಾಗಿ ಬಲಿಷ್ಠಗೊಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ,ಮುದ್ರಾ, ಸ್ಮಾರ್ಟ್ ಇಂಡಿಯಾ ಮೂಲಕ ಹೊಸ ಭಾರತ ನಿರ್ಮಾಣ ಮಾಡಿದ್ದಾರೆ. ಜಲಜೀವನ್ ಮಿಷನ್, ರಸ್ತೆಗಳ ನಿರ್ಮಾಣ ಸೇರಿ ಹತ್ತಾರು ಯೋಜನೆಗಳನ್ನುಮಾಡಿದ್ದಾರೆ. ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ವಿಕಸಿತ ಭಾರತ ನಿರ್ಮಾಣಕ್ಕೆ ತಾವೆಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಯೋಗದಲ್ಲಿ ಮನ್ನಣೆ ಪಡೆದಿರುವುದರಿಂದ ಯೋಗ ಹಬ್ ಆಗಿ ಮಾಡಬೇಕು.ಪೂರ್ವಜರು ಕಟ್ಟಿಸಿರುವ ಕಟ್ಟಡಗಳನ್ನು ಉಳಿಸಿಕೊಂಡು ಪಾರಂಪರಿಕ ಕಟ್ಟಡವನ್ನು ಸಂರಕ್ಷಣೆ ಮಾಡುವುದು,ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿoದ ಯೋಜನೆ ತರಲಾಗುವುದು ಎಂದರು. ಮೈಸೂರು-ಕೊಡಗು ಜಿಲ್ಲೆಗೂ ಕೇಂದ್ರದಿoದ ಸಾಕಷ್ಟು ಕೊಡುಗೆ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೨೫ಸಾವಿರ ಮನೆಗಳು ದೊರೆತಿದೆ. ಪ್ರಸಾದ್ ಯೋಜನೆಯಡಿ ಅನುದಾನ ದೊರೆತಿದೆ.ಮುಂದಿನ ದಿನಗಳಲ್ಲಿ ಕೇಂದ್ರದಿoದ ಹಲವಾರು ಯೋಜನೆಗಳನ್ನು ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.