ಹೊಸದಿಗಂತ ವರದಿ, ವಿಜಯಪುರ:
ದೇಶದಲ್ಲೇ ಕಾಂಗ್ರೆಸ್ 40 ರಿಂದ 45 ಸ್ಥಾನಗಳನ್ನೂ ಸಹ ಗೆಲ್ಲುವುದಿಲ್ಲ, ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಭವಿಷ್ಯ ನುಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಆಡಳಿತಕ್ಕೆ ಜನರು ಬೇಸರಗೊಂಡಿದ್ದಾರೆ ಎಂದು ದೂರಿದರು.
ಡಿ.ಕೆ. ಶಿವಕುಮಾರ ಸಹೋದರ ಡಿ.ಕೆ. ಸುರೇಶ ವಿರುದ್ಧ ಟೀಕಿಸುತ್ತ, ನಮ್ಮ ಅಭ್ಯರ್ಥಿ ಡಾ. ಮಂಜುನಾಥ ಗೆಲ್ಲುತ್ತಾರೆ. ಕಾಂಗ್ರೆಸ್ನವರು ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಆದರೆ ಡಾ. ಮಂಜುನಾಥ ಚುನಾವಣೆಗೆ ಹಣವಿಲ್ಲವೆಂದಿದ್ದರು. ನಾವು ಅವರಿಗೆ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದ್ದೇವೆ. ಅವರ ಬಳಿ ಹಣವಿಲ್ಲದಿದ್ದರೂ ಡಾ. ಮಂಜುನಾಥ ಅವರ ಸೇವೆಗೆ ಗೆಲುವಾಗಲಿದೆ ಎಂದರು.
ಇಡೀ ದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆಯಿದೆ. ಹೀಗಾಗಿ ಬಿಜೆಪಿಗೆ ಐತಿಹಾಸಿಕ ಸೀಟುಗಳು ಲಭ್ಯವಾಗಲಿವೆ. ಈ ಮೂಲಕ 2024 ರ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನಾವು ಮತ್ತೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಉತ್ತಮ ಕೆಲಸಗಾರರು ಆಗಿರುವ ಜಿಗಜಿಣಗಿ ಅವರು 2.5 ಲಕ್ಷದಿಂದ 3.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಕೆ.ಎಸ್. ಈಶ್ವರಪ್ಪ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ, ಈ ವಿಷಯವಾಗಿ ನಾನು ಯಾವ ವಿಷಯವನ್ನೂ ಹೇಳಲಾರೆ ಎಂದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ ಮಹೇಶ ಟೆಂಗಿನಕಾಯಿ, ಎಸ್.ಕೆ. ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಅರುಣ ಶಹಾಪುರ, ಸಂಜಯ ಪಾಟೀಲ ಕನಮಡಿ ಇದ್ದರು.