ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ (Sandeshkhali) ಕೇಂದ್ರೀಯ ತನಿಖಾ ದಳ (CBI) ದಾಳಿ ನಡೆಸಿದ್ದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಹಾಗೂ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಅಮಾನತುಗೊಂಡ ಟಿಎಂಸಿ ನಾಯಕ ಶೇಖ್ ಷಹಜಹಾನ್ (Sheikh Shahjahan) ಮತ್ತವರ ಸಹಚರರ ವಿರುದ್ಧ ಸುಲಿಗೆ, ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ಈ ದಾಳಿ ನಡೆದಿದೆ.
ಸಿಬಿಐ ದಾಳಿ ವೇಳೆ ವಿದೇಶಿ ನಿರ್ಮಿತವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು (Foreign Made Guns) ಹಾಗೂ ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಶೇಖ್ ಷಹಜಹಾನ್ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಂದೇಶ್ಖಾಲಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಭೂಮಿದಾರರಿಗಾಗಿ ಪ್ರತ್ಯೇಕ ಸಹಾಯವಾಣಿ ಮತ್ತು ಇಮೇಲ್ ವಿಳಾಸ ತೆರೆದಿದೆ. ಸಂತ್ರಸ್ತರು ತಮಗಾದ ಅನ್ಯಾಯ ಹೇಳಿಕೊಳ್ಳಬಹುದು, ಅವರ ಮಾಹಿತಿಗಳನ್ನು ಗೌಪ್ತವಾಗಿ ಇಡಲಾಗುತ್ತದೆ ಎಂದು ಸಿಬಿಐ ಹೇಳಿದೆ.
ಈ ಬೆನ್ನಲ್ಲೇ ಒಂದೇ ದಿನ ಸುಮಾರು 50 ದೂರುಗಳು ಬಂದಿವೆ. ಶೇಖ್ ಷಹಜಹಾನ್ ಅವರಿಂದ ಭೂಕಬಳಿಕೆ ಸಂಬಂಧ ಹೆಚ್ಚಿನ ದೂರುಗಳು ಹೇಳಿಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.