ರಾಣೇಬೆನ್ನೂರಿನಲ್ಲಿ ಬೊಮ್ಮಾಯಿ ಪರ ಅಮಿತ್ ಶಾ ಭರ್ಜರಿ ರೋಡ್ ಶೋ

ಹೊಸ ದಿಗಂತ ವರದಿ; ರಾಣೇಬೆನ್ನೂರು

ವಾಣಿಜ್ಯ ನಗರಿ ರಾಣೇಬೆನ್ನೂರಿನಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಾರ ಜನಸ್ತೋಮದ ನಡುವೆ ಭಾರೀ ರೋಡ್ ಶೋ ನಡೆಸಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತ ಯಾಚನೆ ಮಾಡಿದರು.

ಸಂಜೆ ೫ರ ಸುಮಾರಿಗೆ ರಾಣೇಬೆನ್ನೂರಿಗೆ ಆಗಮಿಸಿದ ಅಮಿತ್ ಶಾ ಸುಮಾರು ಒಂದು ಕಿ.ಮಿ. ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು. ದಾರಿಯುದ್ದಕ್ಕೂ ಅಪಾರ ಜನಸಾಗರ ಸೇರಿತ್ತು.

ರೋಡ್ ಶೋ ಪ್ರಾರಂಭದಿಂದಲೇ ಜನರು ರಸ್ತೆಯ ಇಕ್ಕೆಲಗಳಲ್ಲಿ ಎತ್ತರದ ಕಟ್ಟಡಗಳ ಮೇಲೆ ನಿಂತು ಅಮಿತ್ ಶಾ ಅವರಿಗೆ ಕೈ ಬೀಸಿ ಜಯಘೋಷ ಕೂಗಿದರು.

ಪ್ರಾರಂಭದಿಂದ ಕೊನೆಯವರೆಗೂ ಅಮಿತ್ ಶಾ ಜನರತ್ತ ಗುಲಾಬಿ ಹೂಗಳನ್ನು ಎಸೆದು ಹುರಿದುಂಬಿಸಿದರು.

ಕುರುಬಗೇರಿ ಕ್ರಾಸ್ ಬಳಿಯಿಂದ ಹೊರಟ ಮೆರವಣಿಗೆ ದುರ್ಗಾ ಸರ್ಕಲ್, ಎಂ.ಜಿ.ರಸ್ತೆ, ಪೊಸ್ಟ್ ಸರ್ಕಲ್ ಮಾರ್ಗವಾಗಿ ಅಶೋಕ ಸರ್ಕಲ್‌ಗೆ ಬಂದು ತಲುಪಿತು.

ಜನರ ಕೈಯಲ್ಲಿ ಕೇಸರಿ, ಜೆಡಿಎಸ್ ಬಾವುಟಗಳು ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಜನರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಅಮಿತ್ ಶಾ ಫೋಟೊ ಕ್ಲಿಕ್ಕಿಸುತ್ತಾ ಅವರ ಬಗ್ಗೆ ತಮಗಿರುವ ಅಭಿಮಾನ ಪ್ರದರ್ಶಿಸಿದರು. ಇದಲ್ಲದೆ ಮೋದಿ ಮೋದಿ ಘೋಷಣೆ ನಿರಂತರವಾಗಿ ಕೇಳಿ ಬಂದಿತು.

ಯಾತ್ರೆಯ ಕೊನೆಯಲ್ಲಿ ಅಮಿತ್ ಶಾ ಮಾತನಾಡಿ, ಕಮಲದ ಬಟನ್ ಒತ್ತಿದರೆ ಮೋದಿಗೆ ಓಟ್ ಹಾಕಿದಂತಾಗುತ್ತದೆ. ಆ ಮೂಲಕ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಿ ಅವರನ್ನು ದೆಹಲಿಗೆ ಕಳುಹಿಸಿಕೊಡಿ ಎಂದು ಹೇಳಿ ಕೇವಲ ಐದು ನಿಮಿಷದಲ್ಲಿ ಭಾಷಣ ಕೊನೆಗೊಳಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಮುಖಂಡ ಗವಿಸಿದ್ದ ದ್ಯಾಮಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಮತ್ತಿತರರು ರೋಡ್ ಶೋ ವಾಹನದಲ್ಲಿದ್ದರು.

ರೋಡ್ ಶೋ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಿದ್ದು ಎಲ್ಲಿ ನೋಡಿದರಲ್ಲಿ ಪೊಲೀಸರೇ ಕಾಣುತ್ತಿದ್ದರು. ಕೆಲವು ಕಡೆಗಳಲ್ಲಿ ಬ್ಯಾರಿಕೆಡ್‌ಗಳನ್ನು ಅಳವಡಿಸಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!