ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ಶೇಷಶಾಯಿ ವಿಷ್ಣುವಿನ ವಿಗ್ರಹ ಪತ್ತೆಯಾಗಿದ್ದು, ದಕ್ಷಿಣ ಭಾರತದಲ್ಲಿ ಹೊಯ್ಸಳರು ತಯಾರಿಸುತ್ತಿದ್ದ ಮಾದರಿಯ ಈ ಶಿಲ್ಪ ಈ ಭಾಗದಲ್ಲಿ ಪತ್ತೆಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಲಖುಜಿ ಜಾಧವರಾವ್ ಮಹಾರಾಜ್ ಅವರ ಛತ್ರಿ ಸಭಾ ಮಂಟಪ ಪತ್ತೆಗಾಗಿ ನಡೆಸುತ್ತಿರುವ ಉತ್ಖನನದ ವೇಳೆ ಈ ಶಿಲ್ಪ ಪತ್ತೆಯಾಗಿದೆ ಎಂದು ನಾಗ್ಪುರದ ಪುರಾತತ್ವಶಾಸ್ತ್ರಜ್ಞ ಅರುಣ್ ಮಲಿಕ್ ತಿಳಿಸಿದ್ದಾರೆ. ಉತ್ಖನನದ ವೇಳೆ ಆಳವಾಗಿ ಪರಿಶೀಲನೆ ನಡೆಸಿದಾಗ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹ ಪತ್ತೆಯಾಗಿದೆ, ಬಳಿಕ ಮಲಗಿದ ರೂಪದಲ್ಲಿರುವ ವಿಷ್ಣುವಿನ ಬೃಹತ್ ವಿಗ್ರಹ ಪತ್ತೆಯಾಗಿದೆ.
ಈ ವಿಗ್ರಹವು 1.70 ಮೀಟರ್ ಉದ್ದ ಮತ್ತು 1ಮೀಟರ್ ಎತ್ತರವಿದ್ದು, ತಳಹದಿಯ ಅಗಲವು 30 ಸೆಂಟಿಮೀಟರ್ ಇರಬಹುದು ಎಂದು ಅವರು ಪಿಟಿಐ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ವಿಗ್ರಹವನ್ನು ಕ್ಲೋರೈಟ್ ಶಿಸ್ಟ್ ಶಿಲೆಯಿಂದ ರಚಿಸಲಾಗಿದೆ. ಈ ರೀತಿಯ ಶಿಲ್ಪಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೊಯ್ಸಳರು ತಯಾರಿಸುತ್ತಿದ್ದರು. ಇದರಲ್ಲಿ ವಿಷ್ಣು, ಶೇಷ ನಾಗನ ಮೇಲೆ ಮಲಗಿರುವ ಮತ್ತು ಲಕ್ಷ್ಮಿ ದೇವಿಯು ಕುಳಿತುಕೊಂಡು ವಿಷ್ಣುವಿನ ಪಾದಗಳನ್ನು ಒತ್ತುತ್ತಿರುವ ದೃಶ್ಯವಿದೆ. ವಿಗ್ರಹದ ಸುತ್ತಲೂ ವಿಷ್ಣು ದಶಾವತಾರ, ಸಮುದ್ರಮಂಥನವನ್ನು ಚಿತ್ರಿಸಲಾಗಿದೆ. ಸಮುದ್ರಮಂಥನದ ಅಶ್ವ, ಐರಾವತ ಮುಂತಾದವುಗಳೂ ವಿಗ್ರಹದ ಮೇಲೆ ಕಾಣಸಿಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.