ಹೊಸದಿಗಂತ ವರದಿ, ಅಂಕೋಲಾ:
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸತತ13ದಿನಗಳ ಕಾರ್ಚಾರಣೆ ನಡೆದರೂ ಕೇರಳ ಲಾರಿ ಚಾಲಕ ಅರ್ಜುನ್ ಸೇರಿದಂತೆ ಮೂವರು ಮತ್ತು ಲಾರಿ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಭಾನುವಾರ ಸಂಜೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ತೀವ್ರ ಮಳೆ,ವಿಷಮ ವಾತಾವರಣ, ನದಿಯಲ್ಲಿ ಸುಳಿ, ತೀವ್ರ ಸೆಳೆತ ಮತ್ತು ರಾಡಿ ಮಿಶ್ರಿತ ನೀರಿನ ಹಿನ್ನಡಲೆಯಲ್ಲಿ ಕಾರ್ಯಾಚರಣೆ ಅಸಾಧ್ಯವಾಗಿದೆ.
ಮಂತ್ರಿ ಮಾಹಿತಿ :
ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಂತ್ರಿ ಮಂಕಾಳ ವೈದ್ಯ ವಿಷಮ ಪರಿಸ್ಥಿತಿಯಲ್ಲಿ ನದಿ ಆಳದಲ್ಲಿ ಶೋಧ ಕಾರ್ಯಕ್ಕೆ ಫಲ ಸಿಕ್ಕಿಲ್ಲ. ಆರ್ಮಿ, ನೇವಿ ಮತ್ತು ಈಗ ಬಂದ ಮುಳುಗು ತಜ್ಞ ಈಶ್ವರ ಮಲ್ಪೆಯವರ ತಂಡ ನದಿಯಲ್ಲಿ ಹುಡುಕಾಟ ನಡೆಸಿದರೂ ಮಳೆ, ನದಿಯ ತೀವ್ರ ಸೆಳೆತದ ಕಾರಣ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರಕೃತಿ ಸಹಕರಿಸುವವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದರು.
ವಾವಾವರಣ ಪೂರಕವಾದ ನಂತರ ಮತ್ತು ಇನ್ನೂ ಉನ್ನತ ತಂತ್ರಜ್ಞಾನದ ಲಭ್ಯತೆ ನೋಡಿ ಮತ್ತೆ ಆರಂಭ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿ ದೆಹಲಿಯ ಖಾಸಗಿ ಕಂಪನಿ ಡ್ರೋಣ ವರದಿ ಆಧಾರಿಸಿ ನೀಡಿದ್ದ ಎಲ್ಲ ನಾಲ್ಕು ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲಿ ಬರೀ ಕಲ್ಲು, ಮಣ್ಣು ಮತ್ತು ನಾಲ್ಕನೇ ಸ್ಥಳದಲ್ಲಿ ಮರ ಮತ್ತು ದಿಮ್ಮೆ ಕಂಡು ಬಂದಿದೆ. ನದಿಯ ನೀರು ಸಹಕರಿಸದ ಕಾರಣ ಈಶ್ವರ ಮಲ್ಪೆ ತಂಡಕ್ಕೆ ಇನ್ನೂ ಆಳಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ ಎಂದರು.
ಶಾಸಕ ಸತೀಶ ಸೈಲ್, ಎಸ್ಪಿ ನಾರಾಯಣ ಮತ್ತಿತರರು ಇದ್ದರು.