ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ವಿರುದ್ಧ ‘ಕೊರೊನಿಲ್’ ಮಾತ್ರೆ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಯೋಗ ಗುರು ರಾಮ್ದೇವ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಸೂಚಿಸಿದೆ.
ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು, ರಾಮ್ದೇವ್ ವಿರುದ್ಧ ಹಲವು ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.
ಕೆಲವು ಆಕ್ಷೇಪಾರ್ಹ ಟ್ವೀಟ್, ಪೋಸ್ಟ್ ಮತ್ತು ವಿಷಯಗಳನ್ನು ಮೂರು ದಿನಗಳ ಒಳಗಾಗಿ ತೆಗೆದುಹಾಕಲು ನಿರ್ದೇಶನ ನೀಡಲಾಗಿದೆ. ಈ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ, ‘ಎಕ್ಸ್’ ಜಾಲತಾಣವೇ ಅವುಗಳನ್ನು ತೆಗೆದುಹಾಕಲಿದೆ ,ಎಂದು ಹೇಳಿದರು.
ಕೊರೊನಿಲ್ ಮಾತ್ರೆಯು ಕೊರೋನಾವನ್ನು ಗುಣಪಡಿಸಲಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವು ವೈದ್ಯರು 2021ರಲ್ಲಿ ರಾಮ್ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ್ ವಿರುದ್ಧ ಅರ್ಜಿ ಸಲ್ಲಿಸಿದ್ದರು.