ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ, ಮುಡಾ ಹಗರಣವನ್ನು ಖಂಡಿಸಿ ಅಗಸ್ಟ್ 03 ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ಸಿದ್ದವಾಗಿದೆ. ಆದರೆ, ಇದಕ್ಕೆ ದೋಸ್ತಿಗಳ ನಡುವೆ ವೈಮನಸ್ಸು ಮೂಡಿದೆ. ಇಂದು(ಬುಧವಾರ) ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘ ಈ ಪಾದಯಾತ್ರೆ ನಡೆಸಲು ಜೆಡಿಎಸ್ನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದಿದ್ದರು.
ಈ ಕುರಿತು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ನಾನು ಇದನ್ನ ಮಾಧ್ಯಮದಲ್ಲಿ ನೋಡಿದ್ದೇನೆ, ಕುಮಾರಸ್ವಾಮಿ ಕರೆ ಮಾಡಿದ್ರು, ಮತ್ತೆ ಮಾತನಾಡುತ್ತೇನೆ ಎಂದರು.
ಇನ್ನು ನಮ್ಮ ಉದ್ದೇಶ ಈ ಬಿಸಿಯಲ್ಲೇ ಹೋರಾಟ ಆಗಬೇಕು, ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ. ಸಂವಿಧಾನ ಕಾಪಾಡೋ ಸ್ಥಾನದಲ್ಲಿ ಸಿಎಂ ಇದ್ದಾರೆ. ನಾವು ಅನ್ಯಾಯ ಮಾಡಲ್ಲ ಎಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣವನ್ನು ಲೂಟಿ ಮಾಡಿದ್ದಾರೆ. ಸದನದ ಒಳಗೂ ಎಲ್ಲರ ಜೊತೆಗೂ ಮಾತನಾಡಿ ಕಾಂಗ್ರೆಸ್ನವರು ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ ಆಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಅಂದಿದ್ದಾರೆ. ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡುತ್ತೇವೆ. ಜೆಡಿಎಸ್ ಕೂಡ ಎನ್ಡಿಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು. ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ ನಿರ್ಧಾರಕ್ಕೆ ಬರುತ್ತೆವೆ ಎಂದು ಹೇಳಿದರು.
ಜೊತೆಗೆ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಆದರೆ ಯಾವಾಗ ಪಾದಯಾತ್ರೆ ಆಗುತ್ತೆ ಅನ್ನೋದಷ್ಟೇ ಈಗಿರುವುದು. ಅದು ದಲಿತರೊಬ್ಬರ ಭೂಮಿ, ಆತ ಸತ್ತು 25 ವರ್ಷಗಳಾಗಿದೆ. ಅದು ಅಲ್ಲದೇ ಆತ ಸತ್ತು ಹೋದ. ಬದುಕಿದ್ದರೆ ಅದು ಆತನ ಸ್ವಯಾರ್ಜಿತ ಆಸ್ತಿ. ಆದರೆ, ಅದು ಆತನ ಹೆಂಡತಿ ಹೆಸರಿಗೆ ಬಂದು ಪಿತ್ರಾರ್ಜಿತ ಆಸ್ತಿಯಾಗಿದೆ. ಅದನ್ನ ಮಾರಾಟ ಮಾಡಲು ಹೆಂಡತಿ, ಮಕ್ಕಳು ಎಲ್ಲರ ಒಪ್ಪಿಗೆ ಬೇಕು. ಪಹಣಿ ಯಾವುದೇ ದಾಖಲೆ ಆಗಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನಿಂಗ ಒಬ್ಬ ಅನಕ್ಷರಸ್ಥ, ಹೀಗಿರೋವಾಗ ಡೀನೋಟಿಫಿಕೇಶನ್ ಹೇಗೆ ಆಗಿದೆ.ಕೃಷಿ ಭೂಮಿಯಿಂದ ಅದು ಭೂ ಪರಿವರ್ತನೆ ಕೂಡ ಆಗಿದೆ. 2002-03ರಲ್ಲಿ ಮೂಡಾದಿಂದ ಲೇಔಟ್ ಅಪ್ರೂವ್ ಆಗಿ ಅಲ್ಲಿ ಲೇಔಟ್ ಆಗಿದೆ. 12 ಸೈಟ್ ಸಿದ್ದರಾಮಯ್ಯ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ ಕೂಡ ಆಗಿದೆ. ದಲಿತರ ಜಮೀನನ್ನ ಇವರು ಒಳಗೆ ಹಾಕಿದ್ದಾರೆ. ಜಮೀನು ಕಬಳಿಕೆ ಆಗಿದ್ದರೆ ಸರ್ಕಾರ ಅದನ್ನ ರಕ್ಷಣೆ ಮಾಡಬೇಕು. ಈಗ ಅದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡ್ತೇವೆ ಎಂದರು.
ನಾಯಕನ ಆಯ್ಕೆ ಮಾಡುವುದು ಶಾಸಕಾಂಗ ಸಭೆ ಕರೆದು ಅದರಲ್ಲಿ ಆಗಿರುವುದು, ವಿಜಯೇಂದ್ರ ಅವರ ಆಯ್ಕೆ ಕೂಡ ರಾಷ್ಟ್ರೀಯ ಅಧ್ಯಕ್ಷರದ್ದು, ಪಕ್ಷದಲ್ಲಿ ಗೊಂದಲ ಇದ್ದರೆ ಅದನ್ನ ಪಕ್ಷದ ಒಳಗೆ ಸರಿಪಡಿಸೋಣ. ಯತ್ನಾಳ್ ಮತ್ತು ಜಾರಕಿಹೊಳಿ ಹೈಕಮಾಂಡ್ ಒಕೆ ಅಂದ್ರೆ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಹೈಕಮಾಂಡ್ ಓಕೆ ಅಂದ್ರೆ ನಾವು ಮತ್ತೆ ನೋಡೋಣ ಎಂದು ಹೇಳಿದರು.