ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ರಾಜಾತಿಥ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಎಡಿಜಿಪಿ ಕಚೇರಿಯ ಎಸ್ಪಿ ಅವರ ನೇತೃತ್ವದಲ್ಲಿನ ತನಿಖೆ, ಇಂದು ಶನಿವಾರ ಎರಡನೇ ದಿನವು ಮುಂದುವರೆದಿದೆ.
ಎಡಿಜಿಪಿ ಕಚೇರಿಯ ಎಸ್ಪಿ ಆಗಿರುವ ಯಶೋಧಾ ವಂಟಗೋಡಿ ಅವರಿಂದ ಕೇಂದ್ರ ಕಾರಾಗೃಹದಲ್ಲಿ ಎರಡನೇ ದಿನವೂ ಜೈಲಿನ ಅಧಿಕಾರಿಗಳ ತನಿಖೆ ಕಾರ್ಯ ನಡೆದಿದ್ದು, ಶನಿವಾರ ಕೇಂದ್ರ ಕಾರಾಗೃಹದ ವಾರ್ಡನ್ ಸೇರಿದಂತೆ ಹಲವರ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ,ಉಗ್ರ ಜುಲ್ಫಿಕರ್ ಹಿಡಿತದಲ್ಲಿರುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಲಿದೆ ಎಂದು ಮಾಹಿತಿ ಬಂದಿದೆ.
ಇಬ್ಬರು ಜೈಲಾಧಿಕಾರಿಗಳ ಅಮಾನತ್ತು
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಹೈಫೈ ಲೈಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹದ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತ್ತು ಮಾಡಿ,ಕಾರಾಗೃಹ ಇಲಾಖೆಯ ಡಿಜಿ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಕಾರಾಗೃಹದ ಜೈಲಿನ ಅಧಿಕಾರಿಗಳಾದ ಸೈನಾಜ್ ಹಾಗೂ ಪಾಂಡುರಂಗ ಹರವಾಳ ಅವರನ್ನು ಕಲಬುರಗಿ ಕಾರಾಗೃಹದಲ್ಲಿ ಕೈದಿಗಳ ಹತ್ತಿರ ಮೊಬೈಲ್ ಸಿಕ್ಕಿರುವ ಹಿನ್ನೆಲೆಯಲ್ಲಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಮಾಡಲಾಗಿದೆ.