ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎ.ಐ ಅಸ್ತ್ರ: ಕೇಂದ್ರ ಸಚಿವ ನಿತಿನ್​ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟ್ರಾಫಿಕ್​ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚಿ ನಿಖರವಾಗಿ ದಂಡ ವಿಧಿಸುವ ಸಂಬಂಧ ಕೃತಕ ಬುದ್ಧಿಮತ್ತೆ (ಎ.ಐ) ಸೇರಿ ಹೊಸ ವಿಧಾನಗಳ ಬಳಕೆಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಗುರುವಾರ ನಡೆದ 12ನೇ ಆವೃತ್ತಿಯ ಟ್ರಾಫಿಕ್‌ ಇನ್ಪ್ರಾಟೆಕ್‌ ಎಕ್ಸ್‌ಪೊದಲ್ಲಿ ಮಾತನಾಡಿದ ಅವರು, ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಸೇರಿ ಟೋಲ್‌ ಸಂಗ್ರಹ ಹೆಚ್ಚಳಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ಹೆದ್ದಾ‌ರಿಗಳ ಟೋಲ್‌ ಸಂಗ್ರಹದಲ್ಲಿ ಪರಿಣಾಮಕಾರಿಯಾದ ಸುಧಾರಣೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸಮಗ್ರ ತಂತ್ರಜ್ಞಾನ, ಕಟ್ಟುನಿಟ್ಟಾಗಿ ಕಾನೂನು ಜಾರಿ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಬಳಸಿಕೊಳ್ಳದೆ ರಸ್ತೆ ಸುರಕ್ಷತೆ ಕಾಪಾಡುವುದು ಕಷ್ಟಸಾಧ್ಯ ಎಂದು ಹೇಳಿದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ತಾಂತ್ರಿಕ ಪರಿಹಾರೋಪಾಯ ರೂಪಿಸಲು ಖಾಸಗಿ ವಲಯದ ಪರಿಣತರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ನವೋದ್ಯಮ ಮತ್ತು ಸಾರಿಗೆ ವಲಯದಿಂದ ಬರುವ ಪ್ರಸ್ತಾವಗಳನ್ನು ಪರಿಶೀಲಿಸಿ ಉತ್ತಮ ವಿಧಾನಗಳನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡಲಿದೆ ಎಂದು ಹೇಳಿದರು.

ಸಾರಿಗೆ ವಲಯದಲ್ಲಿ ತ್ವರಿತ ಸುಧಾರಣೆಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಈ ಸಮಿತಿಗೆ ಸೂಚಿಸಲಾಗುವುದು ಎಂದರು.

ರಸ್ತೆ ಸುರಕ್ಷತೆಯ ಕಣ್ಗಾವಲು ವ್ಯವಸ್ಥೆಗೆ ಬಳಸುವ ಕ್ಯಾಮೆರಾ ಸೇರಿ ಇತರೆ ಪರಿಕರಗಳ ಬಳಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರ ಬದ್ಧವಿದೆ. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆ ಇಲ್ಲ. ದೊಡ್ಡ ಅಥವಾ ಸಣ್ಣ ಕಂಪನಿಗಳಿಂದ ಬರುವ ಎಲ್ಲಾ ಸಲಹೆಗಳನ್ನು ಪರಿಗಣಿಸಲಾಗುವುದು.ಸಾರ್ವಜನಿಕ, ಖಾಸಗಿ ಮತ್ತು ನವೋದ್ಯಮ ವಲಯದ ಎಲ್ಲಾ ಮಧ್ಯಸ್ಥಿಕೆದಾರರು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸಬೇಕಿದೆ ಎಂದರು.

ಪ್ರತಿ ವರ್ಷ ದೇಶದಾದ್ಯಂತ ರಸ್ತೆ ಅವಘಡಗಳಿಂದ 5 ಲಕ್ಷ ಜನರು ಮೃತಪಡುತ್ತಿದ್ದಾರೆ. ಈ ಪೈಕಿ 18ರಿಂದ 36 ವಯೋಮಾನದವರ ಸಂಖ್ಯೆ ಹೆಚ್ಚಿದೆ. ಅಪಘಾತಗಳಿಂದ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 3ರಷ್ಟು ನಷ್ಟವಾಗುತ್ತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!