ಹೊಸ ದಿಗಂತ ವರದಿ,ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಭಾಗಶಃ ಓದಿ ನಿರ್ಗಮಿಸುತ್ತಿದ್ದ ವೇಳೆ ಗೂಂಡಾಗಳ ತರಹ ವರ್ತಿಸಿ, ರಾಜ್ಯಪಾಲರಿಗೆ ಅವಮಾನ ಮಾಡಿರುವುದು ಇಡೀ ಕರ್ನಾಟಕ ತಲೆತಗ್ಗಿಸುವಂತಹ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ತಿಳಿಸಿದರ ಅವರು, ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು, ರಾಜ್ಯಪಾಲರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಇದ್ದಂತೆ ಎಂದು ತಿಳಿಸಿದ್ದಾರೆ
.
ರಾಜ್ಯಪಾಲರ ಹುದ್ದೆಗೂ ಸಹ ಗೌರವ ನೀಡದೆ, ಅವರಿಗೆ ಅವಮಾನವಾಗುವಂತೆ ವರ್ತಿಸಿ, ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿಯೇ ನಿಂತು ಗೂಂಡಾಗಳಂತೆ ನಡೆದುಕೊಂಡಿದ್ದು ನಾಚಿಕೆಗೇಡಿನ ಸಂಗತಿ. ಇವರಿಗೆ ಮತ ನೀಡಿ, ಅಧಿಕಾರಕ್ಕೆ ತಂದ ಮತದಾರರು ದಿಗ್ಭ್ರಾಂತರಾಗಿದ್ದಾರೆ.
ಕಾಂಗ್ರೆಸ್ಸಿಗರು ತಮ್ಮ ದೌರ್ಜನ್ಯದ ರಾಜಕಾರಣವನ್ನು ರಾಜ್ಯಪಾಲರ ಮೇಲೆಯೂ ಪ್ರಯೋಗಿಸಿದ್ದು ಖಂಡನೀಯ, ಗೌರವಾನ್ವಿತ ರಾಜ್ಯಪಾಲರಿಗೆ ಅವಮಾನವಾಗುವಂತೆ ನಡೆದುಕೊಂಡ ಸಚಿವರು ಹಾಗೂ ಶಾಸಕರನ್ನು ತಕ್ಷಣವೇ ಅಮಾನತ್ತು ಮಾಡಬೇಕು ಎಂದು ಅಗ್ರಹಿಸುತ್ತೇನೆ.



