ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ತಯಾರಿ ಶುರುಮಾಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ಕೇಜ್ರಿವಾಲ್ ಇಂದು ಆಟೋ ಚಾಲಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಕೊಂಡ್ಲಿ ಕ್ಷೇತ್ರದಲ್ಲಿ ಆಟೋ ಚಾಲಕನೋರ್ವನ ಕುಟುಂಬ ಸದಸ್ಯರೊಟ್ಟಿಗೆ ಊಟ ಮಾಡಿರುವ ಕೇಜ್ರಿವಾಲ್, ಆಟೋ ಚಾಲಕ ಸಮುದಾಯಕ್ಕೆ ನೆರವಾಗುವ ಹಲವು ಘೋಷಣೆಗಳನ್ನು ಮಾಡಿದ್ದಾರೆ.
ದೆಹಲಿಯಲ್ಲಿ ಮತ್ತೆ ಆಪ್ ಅಧಿಕಾರಕ್ಕೆ ಬಂದಲ್ಲಿ, ನಗರದ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ವಿಮೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ಆಟೋ ಚಾಲಕರ ಹೆಣ್ಣುಮಕ್ಕಳ ವಿವಾಹಕ್ಕಾಗಿ 1 ಲಕ್ಷ ರೂಪಾಯಿ ನೆರವು ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ.
ಆಟೋ ಚಾಲಕರಿಗೆ ವರ್ಷಕ್ಕೆ 2 ಬಾರಿ 2,500 ರೂಪಾಯಿಗಳ ಸಮವಸ್ತ್ರ ಭತ್ಯೆ, ಚಾಲಕರ ಮಕ್ಕಳಿಗೆ ಉಚಿತ ಕೋಚಿಂಗ್ ಹಾಗೂ ಪೂಚೋ ಆಪ್ ಗೆ ಮತ್ತೆ ಚಾಲನೆ ನೀಡುವ ಭರವಸೆಗಳನ್ನೂ ಕೇಜ್ರಿವಾಲ್ ಆಟೋ ಡ್ರೈವರ್ಸ್ ಸೆ ಚರ್ಚಾ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.
ನೋಂದಾಯಿತ ಆಟೋ ಡ್ರೈವರ್ಗಳ ಮೊಬೈಲ್ ಸಂಖ್ಯೆಗಳ ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ ಅಭಿವೃದ್ಧಿಪಡಿಸಿದ ಡೇಟಾಬೇಸ್ ನ್ನು ಪ್ರವೇಶಿಸಲು ಮತ್ತು ರೈಡ್ ಅನ್ನು ಬುಕ್ ಮಾಡಲು ಅವರಿಗೆ ಕರೆ ಮಾಡಲು ಪೂಚೋ ಆಪ್ ಜನರಿಗೆ ಸಹಕಾರಿಯಾಗಿರಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.