ಹೊಸದಿಗಂತ ವರದಿ, ಹೂವಿನಹಡಗಲಿ(ವಿಜಯನಗರ):
‘ತುಂಬಿದ ಕೊಡ ತುಳಿಕಿತಲೇ ಪರಾಕ್’ ಇದು ನಾಡಿನ ಜನರು ಕುತೂಹಲದಿಂದ ಕಾಯುತ್ತಿದ್ದ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಭವಿಷ್ಯವಾಣಿ.
ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಶುಕ್ರವಾರ ಸಂಜೆ ೧೫ ಅಡಿ ಎತ್ತರದ ಬಿಲ್ಲವನೇರಿದ ರಾಮಪ್ಪ ಗೊರವಯ್ಯ ಕಾರ್ಣಿಕ ಭವಿಷ್ಯ ವಾಣಿ ನುಡಿದರು.
ಈ ಬಾರಿ ಗೊರವಯ್ಯ ನುಡಿದಿರುವ `ತುಂಬಿದ ಕೊಡ ತುಳಿಕಿತಲೇ ಪರಾಕ್’ ಎಂಬ ಭವಿಷ್ಯ ವಾಣಿ ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಮುಂಬರುವ ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆ, ಬೆಳೆಯಾಗುತ್ತದೆ. ಆದರೆ, ರೈತರಿಗೆ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ವ್ಯಕ್ತಿ, ಪಕ್ಷಗಳ ಬದಲಾವಣೆಯ ಮುನ್ಸೂಚನೆ ನೀಡಿದಂತಿದೆ ಎಂದು ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಾರ್ಣಿಕೋತ್ಸವಕ್ಕೂ ಮುನ್ನ ಗೊರವಯ್ಯ ರಾಮಪ್ಪ ಸತತ ೯ ದಿನಗಳ ಕಾಲ ಉಪವಾಸ ಮಾಡುತ್ತಾರೆ. ಇಲ್ಲಿ ನುಡಿಯುವ ಕಾರ್ಣಿಕ(ಭವಿಷ್ಯ ವಾಣಿ) ಹಲವು ವರ್ಷಗಳಿಂದ ಸತ್ಯವಾಗುತ್ತಲೇ ಬಂದಿದ್ದರಿAದ ಕರ್ನಾಟಕ ಮಾತ್ರವಲ್ಲದೇ, ದಕ್ಷಿಣ ಭಾರತದ ವಿವಿಧ ರಾಜ್ಯಗಳ ಜನರಿಗೆ ಇಲ್ಲಿನ ಕಾರ್ಣಿಕವನ್ನು ಮಹತ್ವ ಎನಿಸಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಿಂದ ನಡೆದ ಈ ಕಾರ್ಣಿಕೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಹಾಗೂ ಅಂತಾರಾಜ್ಯಗಳಿoದ ಲಕ್ಷಾಂತರ ಜನ ಭಕ್ತರು ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಗ್ರಾಮೀಣ ಜನರು ಭಕ್ತರು ಸಹ ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ಮೈಲಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಕಣ್ಣು ಹಾಯಿಸಿದೆಲ್ಲೆಡೆ ಭಕ್ತರು ಕಾಣಿಸಿದ್ದು ವಿಶೇಷವಾಗಿತ್ತು.